ಉಡುಪಿ ಶಾಸಕ ಯಶ್ಪಲ್ ಸುವರ್ಣ ಎಂಬಾತ ಕಾಂಗ್ರೆಸ್ ಪಕ್ಷದ ನಾಯಕ , ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ಇಡೀ ಕುಟುಂಬವನ್ನು ಸರ್ವನಾಶ ಮಾಡುತ್ತವೆ ಎಂದು ಬಹಿರಂಗ ಹೇಳಿಕೆ ನೀಡಿದ್ದು , ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ವಿಶೇಷ ತನಿಖಾ ಸಂಸ್ಥೆ (ಎಸ್ಐಟಿ) ರಚಿಸಿ ತನಿಖೆ ನಡೆಸಬೇಕಾದ ಅಗತ್ಯವಿದೆ.
ಗಾಂಧಿ ಕುಟುಂಬವು ದೇಶಕ್ಕೆ ಸ್ವಾತಂತ್ರ್ಯ ಸೇರಿದಂತೆ ವಿವಿಧ ರೀತಿಯಲ್ಲಿ ಅನನ್ಯ ಕೊಡುಗೆ ನೀಡಿದ್ದಾರೆ. ಇಂತಹ ಗಾಂಧಿ ಕುಟುಂಬದ ಇಂದಿರಾಗಾಂಧಿ , ರಾಜೀವ್ ಗಾಂಧಿಯವರನ್ನು ಬಹಿರಂಗವಾಗಿ ಹತ್ಯೆ ಮಾಡಿರುವ ಘಟನೆ ಇಡೀ ಜಗತ್ತಿಗೆ ತಿಳಿದ ಸತ್ಯ. ಇದೀಗ ಮುಂದುವರಿದ ಭಾಗ ಎಂಬಂತೆ ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಯೊಬ್ಬ ಪ್ರತಿಭಟನೆಯ ನೆಪದಲ್ಲಿ ಉಡುಪಿಯ ಕೇಂದ್ರ ಭಾಗದಲ್ಲಿ ನಿಂತು ಸಾರ್ವಜನಿಕವಾಗಿ ರಾಹುಲ್ ಗಾಂಧಿಯವರ ಇಡೀ ಕುಟುಂಬವನ್ನು ಸರ್ವನಾಶ ಮಾಡುತ್ತೇವೆ ಎಂದು ಸವಾಲು ಹಾಕಿದ್ದನ್ನು ಯಾವುದೇ ರೀತಿಯಲ್ಲೂ ನಗಣ್ಯ ಎಂದು ಭಾವಿಸಲು ಸಾಧ್ಯವಿಲ್ಲ.
ಯಶ್ಪಲ್ ಸುವರ್ಣ ಹಲವು ಕ್ರಿಮಿನಲ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದವ. ಈಗಲೂ ತಾನೊಬ್ಬ ಶಾಸಕ ಎಂಬುದನ್ನು ಮರೆತು ಬೀದಿರೌಡಿಗಳಂತೆ ಸಂಘಪರಿವಾರದ ಕಡಿ , ಕೊಲ್ಲು , ಮಚ್ಚು ,ಲಾಂಗುಗಳ ಸಂಸ್ಕೃತಿಯಲ್ಲೇ ಕಾರ್ಯಚಟುವಟಿಕೆಗಳನ್ನು ಮಾಡುತ್ತಿರುವಾಗ ಈತ ಯಾವುದಕ್ಕೂ ಹೇಸದೆ ಮನುಷ್ಯ. ಈಗಾಗಲೇ ದೇಶದಾದ್ಯಂತ RSS ಪ್ರೇರಿತರು ಗೌರಿ ಲಂಕೇಶ್ , ಎಂ.ಎಂ ಕಲ್ಬುರ್ಗಿ , ಪನ್ಸಾರೆ ಸೇರಿದಂತೆ ಹಲವು ನಾಯಕರ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಕ್ರಿಮಿನಲ್ ಹಿನ್ನೆಲೆಯ ಯಶ್ಪಲ್ ಸುವರ್ಣನ ಬಹಿರಂಗ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿ , ಈ ಬಗ್ಗೆ ಪ್ರಕರಣದ ವಿಶೇಷ ತನಿಖೆಗಾಗಿ ವಿಶೇಷ ತನಿಖಾ ಸಂಸ್ಥೆಯನ್ನು ಸ್ಥಾಪಿಸಿ , ಆ ಮೂಲಕ ಆತನನ್ನು ತನಿಖೆಗೊಳಪಡಿಸಬೇಕು ಎಂದು ಸತೀಶ್ ಕಾರ್ಕಳ ಒತ್ತಾಯಿಸಿದ್ದಾರೆ.


