ಹೆಬ್ರಿ : ರಾಷ್ಟ್ರಿಯ ಹೆದ್ದಾರಿ 169ಎ ಯ ಹೆಬ್ರಿ ಕೆಳಪೇಟೆಯಿಂದ ಪೊಲೀಸ್ ಕ್ವಾರ್ಟರ್ಸ್ ತನಕ ಟ್ರಾಫಿಕ್ ನಿಂದ ಮುಕ್ತಿ ಪಡೆಯಲು 4 ಪಥದ ರಸ್ತೆಯನ್ನು ನಿರ್ಮಿಸಲು, ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರಕ್ಕೆ ಶಿಫಾರಸು ಮಾಡಲು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಹೆಬ್ರಿಯ ಸಾಮಾಜಿಕ ಕಾರ್ಯಕರ್ತ ಕುಚ್ಚೂರು ಶ್ರೀಕಾಂತ್ ಪೂಜಾರಿ ಬುಧವಾರ ಹೆಬ್ರಿಯಲ್ಲಿ ಮನವಿ ಮಾಡಿದರು.
ಹೆಬ್ರಿ ಸರ್ಕಲ್ ನಲ್ಲಿ ದಿನನಿತ್ಯ ಚಾಲಕರಿಗೆ, ವಿದ್ಯಾರ್ಥಿಗಳಿಗೆ, ಪಾದಾಚಾರಿಗಳಿಗೆ ಯಾವಾಗಲೂ ಟ್ರಾಫಿಕ್ ಜಾಮ್ ನಿಂದ ಸಮಸ್ಯೆ ಇರುತ್ತದೆ. ಆಂಬುಲೆನ್ಸ್ ಗಳು ಸುಗಮವಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಬೃಹತ್ ಗಾತ್ರದ ವಾಹನಗಳು ಬಂದರೆ ಕೆಲಕಾಲ ರಸ್ತೆ ಬಂದ್ ಆಗುತ್ತದೆ. ಈ ಸಮಸ್ಯೆಯ ಮುಕ್ತಿಗಾಗಿ ಹೆಬ್ರಿಗೆ ೪ ಪಥದ ರಸ್ತೆಯ ಅಗತ್ಯವಿದೆ ಎಂದು ಶ್ರೀಕಾಂತ್ ಪೂಜಾರಿ ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ಸ್ವೀಕರಿಸಿದ ಸಚಿವ ಸತೀಶ್ ಜಾರಕಿಹೊಳಿ, ಸ್ಥಳವನ್ನು ಪರಿಶೀಲನೆ ನಡೆಸಿ, ಇದರ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಸಂಬಂಧಪಟ್ಟವರಿಗೆ ಶಿಫಾರಸು ಮಾಡುತ್ತೇನೆ ಎಂದು ಭರವಸೆ ನೀಡಿದರು.


