ಮಾನವನ ಹಸ್ತಕ್ಷೇಪದಿಂದಾಗಿ ಪಶ್ಚಿಮಘಟ್ಟದಲ್ಲಿ ಭೂಕುಸಿತ, ದುರಂತಗಳ ನಡೆಯುತ್ತಿದೆ. : ಪರಿಸರ ಪ್ರೇಮಿ ದಿನೇಶ ಹೊಳ್ಳ.
ಹೆಬ್ರಿ : ಮಾನವನ ಹಸ್ತಕ್ಷೇಪದಿಂದಾಗಿ ಪಶ್ಚಿಮಘಟ್ಟದಲ್ಲಿ ಬರಗಾಲ, ಭೂಕುಸಿತ, ದುರಂತಗಳ ನಡೆಯುತ್ತಿದೆ., ಸಾರ್ವಜನಿಕರು ಸರ್ಕಾರ ಪಶ್ಚಿಮಘಟ್ಟದ ಮೇರುವ ಯೋಜನೆಗಳನ್ನು ವಿರೋಧಿಸಬೇಕು, ಪಶ್ಚಿಮಘಟ್ಟ ನೆಮ್ಮದಿಯಲ್ಲಿದ್ದರೆ ದಕ್ಷಿಣ ಭಾರತವೇ ನೆಮ್ಮದಿಯಲ್ಲಿರುತ್ತದೆ ಎಂದು ಅಂತರಾಷ್ಟ್ರೀಯ ಕಲಾವಿದರಾದ ದಿನೇಶ್ ಹೊಳ್ಳ ಅಭಿಪ್ರಾಯಪಟ್ಟರು.
ಅವರು ಹೆಬ್ರಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಅಮೃತ ಭಾರತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಪಶ್ಚಿಮ ಘಟ್ಟ ಉಳಿಸುವಲ್ಲಿ ಮಾಧ್ಯಮಗಳ ಹೊಣೆ ವಿಶೇಷ ಉಪನ್ಯಾಸ ನೀಡಿದರು. ಪಶ್ಚಿಮಘಟ್ಟದಲ್ಲಿರುವ ಜೇನು ಕುಲ ನಾಶವಾದರೆ ಮಾನವ ಕುಲವೇ ನಾಶವಾಗಲಿದೆ, ಗಿಡಮರಗಳು, ಪರಿಸರದ ಬಗ್ಗೆ ನಾವು ಕಾಳಜಿ ವಹಿಸಿದರೆ ಪಶ್ಚಿಮಘಟ್ಟ ಸೇರಿ ಪರಿಸರ ಉಳಿಯುತ್ತದೆ. ಅದು ನಮ್ಮೇಲ್ಲರಿಂದಲೇ ಸಾಧ್ಯವಾಗುತ್ತದೆ ಎಂದು ದಿನೇಶ ಹೊಳ್ಳ ಅಭಿಪ್ರಾಯಪಟ್ಟರು.
ಹೆಬ್ರಿ ಶ್ರೀ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ. ಭಾರ್ಗವಿ ಆರ್ ಐತಾಳ್ ಮಾತನಾಡಿ ಇ ಪೇಪರ್ ಗಿಂತ ಪತ್ರಿಕಾ ಮಾಧ್ಯಮವೇ ಹೆಚ್ಚು ಪ್ರಸ್ತುತವಾಗಿದೆ. ಮಕ್ಕಳು ಆಸಕ್ತಿಯಿಂದ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು. ಹೆಬ್ರಿ ಅಮೃತ ಭಾರತಿ ಟ್ರಸ್ಟ್ ಕಾರ್ಯದರ್ಶಿ ಗುರುದಾಸ ಶೆಣೈ ಮಾತನಾಡಿ ಪತ್ರಿಕೆಗಳು ಜೀವನದ ಪ್ರಮುಖ ಅಂಗ, ವಿಶ್ವದ ಸುದ್ದಿಗಳನ್ನು ಜನಸಮುದಾಯಕ್ಕೆ ತಲುಪಿಸುವ ಪತ್ರಕರ್ತರ ಶ್ರಮ ಶ್ಲಾಘನೀಯ. ಪತ್ರಿಕಾ ಸ್ವಾತಂತ್ರ್ಯದಿಂದಾಗಿ ಸುದ್ದಿಗಳು ಅತೀ ಸುಲಭವಾಗಿ ತಲುಪುವಂತಾಗಿದೆ. ಒಳ್ಳೇಯ ಸುದ್ದಿಗಳನ್ನು ಜನಮನಕ್ಕೆ ತಲುಪಿಸುವ ಕಾರ್ಯಗಳು ನಡೆಯಲಿದೆ ಎಂದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ ಮಾತನಾಡಿ ಪತ್ರಿಕೆ, ಪುಸ್ತಕ ಓದುವುದರಿಂದ ನಮ್ಮ ಜೀವನ ಬೆಳಗುತ್ತದೆ, ಪತ್ರಿಕೆಯ ಓದಿನಿಂದ ಜ್ಞಾನ ವೃದ್ಧಿಯಾಗುತ್ತದೆ. ಓದುವ ಹವ್ಯಾಸವನ್ನು ಬೆಳೆಸಿಕೊಂಡರೆ ಬದುಕಿಗೆ ಪೂರಕವಾಗುತ್ತದೆ. ವಿದ್ಯಾರ್ಥಿಗಳು ಪತ್ರಕರ್ತರರಾಗದಿದ್ದರೂ ಭವಿಷ್ಯದ ಓದುಗರಾಗಿ ಎಂದು ಆಶಿಸಿದರು. ಹೆಬ್ರಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನರೇಂದ್ರ ಎಸ್ ಮರಸಣಿಗೆ ಅಧ್ಯಕ್ಷತೆ ವಹಿಸಿದ್ದರು.
ಅಂತರಾಷ್ಟ್ರೀಯ ಕಲಾವಿದರಾದ ಪರಿಸರ ಪ್ರೇಮಿ ದಿನೇಶ್ ಹೊಳ್ಳ ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಸಾಧಕಿ ಹೆಬ್ರಿ ಪತ್ರಕರ್ತರ ಸಂಘದ ಸದಸ್ಯೆ ಧನ್ವಿ ಹೆಬ್ಬಾರ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. 25 ವರ್ಷಗಳಿಂದ ಪತ್ರಿಕಾ ವಿತರಕರಾಗಿರುವ ಹೆಬ್ರಿಯ ಮಾಧವ ನಾಯಕ್ ಅವರನ್ನು ಗೌರವಿಸಲಾಯಿತು.
ಹೆಬ್ರಿ ಅಮೃತ ಭಾರತಿ ಟ್ರಸ್ಟ್ ಪ್ರಮುಖರಾದ ಬಾಲಕೃಷ್ಣ ಮಲ್ಯ, ಯೋಗೀಶ ಭಟ್, ರಾಮಕೃಷ್ಣ ಆಚಾರ್ಯ, ಸಾರ್ವಜನಿಕ ಸಂಪರ್ಕಾಧಿಕಾರಿ ವಿಜಯ ಕುಮಾರ್ ಶೆಟ್ಟಿ, ಅಮೃತ ಭಾರತಿ ಸಮೂಹ ಸಂಸ್ಥೆಗಳ ಮುಖ್ಯಸ್ಥರು, ಉಪನ್ಯಾಸಕರು, ಶಿಕ್ಷಕರು, ಹೆಬ್ರಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುಕುಮಾರ್ ಮುನಿಯಾಲ್, ಉಪಾಧ್ಯಕ್ಷ ಸಂಜೀವ ಆರ್ಡಿ, ಕೋಶಾಧಿಕಾರಿ ಸುಮಲತಾ ಹೆಬ್ಬಾರ್ ಉಪಸ್ಥಿತರಿದ್ದರು.
ಅಮೃತ ಭಾರತಿ ಶಿಕ್ಷಣ ಸಂಸ್ಥೆಯ ಸಂಸ್ಕೃತ ಶಿಕ್ಷಕ ಮಡಾಮಕ್ಕಿ ವೇದವ್ಯಾಸ ತಂತ್ರಿ ನಿರೂಪಿಸಿ ನರೇಂದ್ರ ಎಸ್ ಮರಸಣಿಗೆ ಸ್ವಾಗತಿಸಿ ಸಂಜೀವ ಆರ್ಡಿ ವಂದಿಸಿದರು.





