ಹೆಬ್ರಿ : ದೇವರು ಸರ್ವೋತ್ತಮ. ಆತನ ಮಹಿಮೆ ಅಪಾರ. ಪ್ರತಿಯೊಂದು ವಸ್ತುವಿನಲ್ಲೂ ಭಗವಂತನಿದ್ದಾನೆ. ನಾವು ಮಾಡುವ ಪ್ರತಿಯೊಂದು ಕಾರ್ಯದಲ್ಲೂ ದೇವರ ಚಿಂತನೆ ಇರಬೇಕು. ನಾವು ದೇವರಲ್ಲಿ ಏನನ್ನೂ ನಿರೀಕ್ಷಿಸದೆ ದೈನಂದಿನ ಕರ್ತವ್ಯಗಳನ್ನು ಮಾಡುತ್ತಾ,ಪರಿಶುದ್ಧ ಭಕ್ತಿಯಿಂದ ದೇವರನ್ನು ಪ್ರಾರ್ಥಿಸಿದಾಗ ಆತನ ಪರಿಪೂರ್ಣ ಅನುಗ್ರಹ ನಮಗೆ ಲಭಿಸುತ್ತದೆ.ವಿಷ್ಣು ಸಹಸ್ರನಾಮ ನಾಮಾವಳಿಯೊಂದಿಗೆ ತುಳಸಿ ಅರ್ಚನೆ ಮಾಡುವ ಮೂಲಕ ವಿಠ್ಠಲನ ಆರಾಧನೆ ಬಲ್ಲಾಡಿ ಮಠದಲ್ಲಿ ನಿರಂತರ ನಡೆಯುತ್ತಿದೆ. ವಿಠ್ಠಲ ದೇವರು ಲೋಕಕ್ಕೆ ಒಳಿತನ್ನು ಉಂಟುಮಾಡಲಿ ಎಂದು ಹಿರಿಯಡ್ಕ ನೆಕ್ಕರ್ ಪಲ್ಕೆಯ ವಿದ್ವಾನ್ ಸೀತಾರಾಮ ಆಚಾರ್ಯ ಹೇಳಿದರು.
ಅವರು ಮುದ್ರಾಡಿ ಗ್ರಾಮದ ಬಲ್ಲಾಡಿ ಮಠದ ಶ್ರೀ ವಿಠ್ಠಲ ದೇವರ ಸನ್ನಿಧಿಯಲ್ಲಿ ನಡೆದ ಲಕ್ಷ ತುಳಸಿ ಅರ್ಚನೆಯಲ್ಲಿ ಪಾಲ್ಗೊಂಡು ಧಾರ್ಮಿಕ ಉಪನ್ಯಾಸ ನೀಡಿದರು.
ವಿದ್ವಾನ್ ಪದ್ಮನಾಭ ಆಚಾರ್ಯ ಗಿಲ್ಲಾಳಿ ಹಾಗೂ ವಿದ್ವಾನ್ ಎಂ. ರಾಘವೇಂದ್ರ ಅಡಿಗ ಅವರ ನೇತೃತ್ವದಲ್ಲಿ ಹೆಬ್ರಿ ಹಾಗೂ ಕಾರ್ಕಳ ತಾಲ್ಲೂಕು ವಿಪ್ರ ಬಾಂಧವರ ಸಹಕಾರದಿಂದ ತುಳಸಿ ಅರ್ಚನೆ ನಡೆಯಿತು. ಅರ್ಚಕ ನಾರಾಯಣ ಭಟ್ ಸ್ವಾಗತಿಸಿ, ವಂದಿಸಿದರು.


