ಹೆಬ್ರಿ ದೇವಸ್ಥಾನದ ಪಕ್ಕದಲ್ಲೇ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ.
ದೇವಸ್ಥಾನ ಉಳಿಸಲು ಭಕ್ತರು ಕೈಜೋಡಿಸಿ : ಹೆಬ್ರಿ ತಾರಾನಾಥ ಬಲ್ಲಾಳ್.
ಹೆಬ್ರಿ : ಉಡುಪಿ ಹೆಬ್ರಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169 ಎ 1 ಸಾವಿರ ವರ್ಷ ಐತಿಹಾಸಿಕ ಹಿನ್ನಲೆಯ ಹೆಬ್ರಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಪಕ್ಕದಲ್ಲೇ ಹಾದು ಹೋಗಲಿದ್ದು ರಾಷ್ಟ್ರೀಯ ಹೆದ್ದಾರಿಯ ಭೂಸ್ವಾಧೀನದಲ್ಲಿ ದೇವಸ್ಥಾನದ ಭೂಮಿ ಹೋಗಲಿದೆ. ಕ್ಷೇತ್ರದ ಭಕ್ತಸಮೂಹ ಸೇರಿ ದೇವಸ್ಥಾನವನ್ನು ಉಳಿಸಿಕೊಳ್ಳಬೇಕಿದೆ. ಅದಕ್ಕಾಗಿ ಇದೇ ಜುಲೈ 16 ರಂದು ದೇವಸ್ಥಾನ ಉಳಿಸಿ ಬೃಹತ್ ಸಾರ್ವಜನಿಕ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಾವಿರಾರು ಮಂದಿ ಸೇರಿ ನಮ್ಮ ದೇವಸ್ಥಾನವನ್ನು ಉಳಿಸಿಕೊಳ್ಳಬೇಕು ಎಂದು ದೇವಸ್ಥಾನದ ಅನುವಂಶಿಕ ಆಡಳಿತ ಮೋಕ್ತೇಸರ ಹೆಬ್ರಿ ತಾರಾನಾಥ ಬಲ್ಲಾಳ್ ಮನವಿ ಮಾಡಿದರು.
ಅವರು ಭಾನುವಾರ ದೇವಸ್ಥಾನ ಉಳಿಸಿ ಬೃಹತ್ ಅಭಿಯಾನದ ಪ್ರಯುಕ್ತ ನಡೆದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಜುಲೈ 16 ರಂದು ದೇವಸ್ಥಾನದಲ್ಲಿ ಸಾವಿರಾರು ಮಂದಿ ಭಕ್ತಸಮೂಹ ಸೇರಿ ಮೆರವಣಿಗೆಯಲ್ಲಿ ಹೆಬ್ರಿ ತಾಲ್ಲೂಕು ಕಚೇರಿಗೆ ತೆರಳಿ ತಹಶೀಲ್ಧಾರ್ ಮೂಲಕ ಸರ್ಕಾರ, ಜಿಲ್ಲಾಧಿಕಾರಿಗಳು ಮತ್ತು ಕುಂದಾಪುರ ಸಹಾಯಕ ಕಮೀಷನರ್ ಅವರಿಗೆ ಮನವಿ ಸಲ್ಲಿಸಲಾಗುತ್ತದೆ, ಎಲ್ಲರೂ ಕೈ ಜೋಡಿಸಿ ನಮ್ಮೂರಿನ ದೇವಸ್ಥಾನವನ್ನು ಉಳಿಸಿಕೊಂಡುವಂತೆ ಹೆಬ್ರಿ ತಾರಾನಾಥ ಬಲ್ಲಾಳ್ ವಿನಂತಿಸಿದರು. ಪ್ರಮುಖರಾದ ಟಿ.ಜಿ.ಆಚಾರ್ ಹೆಬ್ರಿ, ಸೀತಾನದಿ ವಿಠ್ಠಲ ಶೆಟ್ಟಿ, ಬೇಳಂಜೆ ಹರೀಶ ಪೂಜಾರಿ, ರಾಮಕೃಷ್ಣ ಆಚಾರ್ ಹೆಬ್ರಿ ಸೇರಿದಂತೆ ವಿವಿಧ ಪ್ರಮುಖರು ಮಾತನಾಡಿ ಸಲಹೆ ನೀಡಿದರು. ಹೆಬ್ರಿಯ ವಿವಿಧ ಪ್ರಮುಖರು, ಗಣ್ಯರು, ಸಂಘಸಂಸ್ಥೆಗಳ ಪ್ರಮುಖರು, ಭಕ್ತ ಸಮೂಹ ಸಭೆಯಲ್ಲಿ ಭಾಗವಹಿಸಿ ಸಲಹೆ ನೀಡಿದರು.


