ಮುದ್ರಾಡಿ : ಹೆತ್ತವರು ಹಾಗೂ ಶಿಕ್ಷಕರು ಮಕ್ಕಳ ಮೇಲೆ ಸದಾ ಕಾಳಜಿ ವಹಿಸಿಕೊಂಡು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ನಿರತರಾಗಿರುತ್ತಾರೆ. ವಿದ್ಯಾರ್ಥಿಗಳು ಗುರುಹಿರಿಯರಲ್ಲಿ ಭಕ್ತಿ, ನಂಬಿಕೆ, ವಿಶ್ವಾಸವನ್ನು ಇಟ್ಟುಕೊಂಡು ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿ ಸರ್ಕಾರ ಸಹಿತ ಶಾಲೆಯಲ್ಲಿ ಆಸ್ತಿತ್ವದಲ್ಲಿರುವ ವಿವಿಧ ಸಂಘಗಳು ಮಕ್ಕಳಲ್ಲಿ ನಾಯಕತ್ವ ಗುಣ,ಪರಿಸರ ಕಾಳಜಿ,ಜವಾಬ್ದಾರಿ ಹೊರುವ ಸಾಮರ್ಥ್ಯ, ಪ್ರತಿಭೆಗೆ ಸೂಕ್ತ ವೇದಿಕೆಯನ್ನು ಒದಗಿಸಿಕೊಟ್ಟು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಲು ನೆರವಾಗುತ್ತದೆ ಎಂದು ಮುದ್ರಾಡಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ನಾರಾಯಣ ಹೇಳಿದರು.
ಅವರು ಮುದ್ರಾಡಿ ಎಂಎನ್ ಡಿಎಸ್ಎಂ ಅನುದಾನಿತ ಪ್ರೌಢಶಾಲೆಯಲ್ಲಿ 2026-27 ನೆ ಸಾಲಿನ ವಿವಿಧ ಸಂಘಗಳನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿ ಸರ್ಕಾರದ ಕಾರ್ಯಚಟುವಟಿಕೆಗಳ ಬಗ್ಗೆ ರಘುಪತಿ ಹೆಬ್ಬಾರ್ ಮಾತನಾಡಿದರು. ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಹಾಗೂ ಆಪ್ತ ಸಮಾಲೋಚನ ಘಟಕ, ಕಲ್ಪನಾ ಪರಿಸರ ಸಂಘ, ಕನ್ನಡ ಸಾಹಿತ್ಯ ಸಂಘ, ವಿಜ್ಞಾನ ಮತ್ತು ಆರೋಗ್ಯ ಸಂಫ, ನೇತಾಜಿ ಮತದಾರರ ಸಾಕ್ಷರತ ಕ್ಲಬ್ ಗಳ ಕಾರ್ಯಚಟುವಟಿಕೆಗಳ ಬಗ್ಗೆ ಶಿಕ್ಷಕ ಪಿ. ವಿ. ಆನಂದ ಮಾತನಾಡಿದರು.
ಇದೇ ಸಂದರ್ಭದಲ್ಲಿ 2025-26 ನೆ ಸಾಲಿನ ಎನ್ ಎಂ ಎಂ ಎಸ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ವಿದ್ಯಾರ್ಥಿ ವೇತನ ಪಡೆಯಲು ಅರ್ಹತೆ ಪಡೆದ ಸಾನ್ವಿತ್ ಅವರನ್ನು ಸನ್ಮಾನಿಸಲಾಯಿತು. ರಕ್ಷಕ ಶಿಕ್ಷಕ ಸಮಿತಿ ಅಧ್ಯಕ್ಷ ಪ್ರತಿಮಾ ದೇವಾಡಿಗ, ವಿದ್ಯಾರ್ಥಿ ನಾಯಕ ಪ್ರತೀಕ್ ಮಾತನಾಡಿದರು. ಶಾಲೆಯ ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿ ಸರ್ಕಾರದ ಮಂತ್ರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ವಂಶಿಕಾ, ಪ್ರತಿಜ್ಞಾ, ಸಹನಾ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಅಂಜಲಿ ನಿರೂಪಿಸಿ, ವಿದ್ಯಾರ್ಥಿ ಶೋಭಿತ್ ವಂದಿಸಿದರು. ಶಿಕ್ಷಕಿಯರಾದ ಶ್ಯಾಮಲಾ, ಅನುಷಾ, ಶಿಕ್ಷಕೇತರ ಸಿಬ್ಬಂದಿ ಮಹೇಶ್ ಸಹಕರಿಸಿದರು.


