ಕಲೆ, ನಾಟಕ, ಸಾಹಿತ್ಯ, ಸಾಂಸ್ಕೃತಿಕ ಒಲವು ದೈವದತ್ತವಾದುದು : ಡಾ. ಜೀವನ್ ರಾಂ ಸುಳ್ಯ
ಹೆಬ್ರಿ : ಪ್ರತಿಯೊಬ್ಬ ವ್ಯಕ್ತಿಯಲ್ಲೂ ಕಲೆ, ನಾಟಕ, ಸಾಹಿತ್ಯ ಸಂಸ್ಕೃತಿಯ ಕುರಿತ ಒಲವು ದೈವದತ್ತವಾಗಿರುತ್ತದೆ. ವ್ಯಕ್ತಿಯು ಅದನ್ನು ಗೌರವಿಸಿ ತನ್ನ ಜೀವನದಲ್ಲಿ ಬೆಳೆಸಿಕೊಂಡಾಗ ಅದು ಬದುಕಿನ ಭಾಗವಾಗುತ್ತದೆ. ಯಾವುದೇ ಕಲೆಗಳು ಸುಲಭವಾಗಿ ಲಭಿಸುವುದಿಲ್ಲ. ಕಲೆಯು ಒಲಿದ ಬಳಿಕ ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮದಾಗಬೇಕು. ಸದಾ ಕಾಲ ನಮ್ಮಲ್ಲಿ ಸೌಂದರ್ಯ ಪ್ರಜ್ಞೆ ಜಾಗೃತವಾಗಿರಬೇಕು. ಒಬ್ಬ ಕಲಾವಿದ ಅನೇಕ ದುಶ್ಚಟಗಳಿಂದ ದೂರವಿರಬೇಕು. ಅನೇಕ ಸವಾಲುಗಳ ನಡುವೆ ಜೀವನದಲ್ಲಿ ಧನಾತ್ಮಕ ಚಿಂತನೆಯನ್ನು ರೂಢಿಸಿಕೊಂಡು ನಾವು ಬೆಳೆಯುವಂತೆ ನಮ್ಮ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಮಾಡುತ್ತದೆ. ಎಂದು ರಂಗ ಕಲಾವಿದ ಮತ್ತು ನಿರ್ದೇಶಕರಾದ ಡಾ. ಜೀವನ್ ರಾಂ ಸುಳ್ಯ ಹೇಳಿದರು. ಅವರು ಶನಿವಾರ ಹೆಬ್ರಿಯ ಎಸ್. ಆರ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 2026 – 27ನೇ ಶೈಕ್ಷಣಿಕ ವರ್ಷದ ಕನ್ನಡ ಸಾಹಿತ್ಯ ಸಂಘ ಮತ್ತು ಸಾಂಸ್ಕೃತಿಕ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಪ್ನಾ ಎನ್ ಶೆಟ್ಟಿಯವರು ಮಾತನಾಡಿ, ವಿದ್ಯಾರ್ಥಿಗಳು ತನ್ನ ಶೈಕ್ಷಣಿಕ ಬದುಕಿನಲ್ಲಿ ಕೇವಲ ಅಧ್ಯಯನದಲ್ಲಿ ತೊಡಗಿಕೊಳ್ಳದೆ ಸಾಂಸ್ಕೃತಿಕ ಚಟುವಟಿಕೆಗಳನ್ನು ತಮ್ಮನ್ನು ತಾವು ತೊಡಗಿಸಿಕೊಂಡಾಗ ಸರ್ವತೋಮುಖ ಪ್ರಗತಿ ಸಾಧ್ಯವಾಗುತ್ತದೆ. ಜೀವನ್ ರಾಂ ಸುಳ್ಯವರು ಸಾಮಾಜಿಕ ಮಾಧ್ಯಮದ ಮೂಲಕ ಸಾಮಾಜಿಕ ಕಳಕಳಿಯ, ಜಾಗೃತಿಯನ್ನು ಮೂಡಿಸುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಇನ್ನಷ್ಟು ಮುಂದಿನ ದಿನಗಳಲ್ಲಿ ಇಂಥ ಕೆಲಸಗಳು ನಿಮ್ಮಿಂದ ಆಗಲಿ ಎಂದು ಹೇಳಿದರು.
ಎಸ್.ಆರ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಶಾಂತ್ ಮಾತನಾಡಿ, ಜೀವನ್ ರಾಂ ಸುಳ್ಯ ಅವರ ಮಾತು ನಮ್ಮ ವಿದ್ಯಾರ್ಥಿಗಳ ಮನಸ್ಸು ಅರಳುವಂತೆ ಮತ್ತು ಸಂಭ್ರಮಿಸುವಂತೆ ಮಾಡಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಸಂಘ ಮತ್ತು ಸಾಂಸ್ಕೃತಿಕ ಸಂಘದ ಸಂಚಾಲಕ ಮತ್ತು ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ದೀಪಕ್ ಎನ್ ಉಪಸ್ಥಿತರಿದ್ದರು.
ದೀಪಕ್ ಎನ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಕನ್ನಡ ಉಪನ್ಯಾಸಕಿ ಪ್ರಗತಿ ಉದ್ಘಾಟಕರನ್ನು ಪರಿಚಯಿಸಿ, ವಿದ್ಯಾರ್ಥಿಗಳಾದ ಐಶ್ವರ್ಯ ಶೆಟ್ಟಿ ನಿರೂಪಿಸಿ, ಶ್ಯಾಮಿಲಿ ಆಚಾರ್ಯ ವಂದಿಸಿದರು.



