ಹೆಬ್ರಿ : ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಾನವಿಕ ಸಂಘ ಹಾಗೂ ಮಾನವ ಹಕ್ಕುಗಳ ಸಂಘ ಮತ್ತು ಐ.ಕ್ಯೂ ಎ.ಸಿ ಸಹಯೋಗದಲ್ಲಿ ಬುಧವಾರ “ಸಮಕಾಲೀನ ಸಮಾಜದಲ್ಲಿ ಸಾಮಾಜಿಕ ವಿಜ್ಞಾನಗಳ ಸವಾಲುಗಳು” ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಸಮಾಜ ವಿಜ್ಞಾನಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಇತಿಹಾಸ, ಅರ್ಥಶಾಸ್ತ್ರ ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಮನಃಶಾಸ್ತ್ರ, ತತ್ವಶಾಸ್ತ್ರ, ಭೂಗೋಳಶಾಸ್ತ್ರ ಹೀಗೆ ವಿವಿಧ ವಿಷಯಗಳು ವಿಶ್ವ ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ. ಆದರೆ ಉದ್ಯೋಗವಕಾಶಗಳ ಭರವಸೆ ನೀಡುವ ಇಂದಿನ ವಾಣಿಜ್ಯ ಮತ್ತು ತಂತ್ರಜ್ಞಾನದ ವಿಷಯಗಳಿಗೆ ಹೋಲಿಸಿದಾಗ, ಸಾಮಾಜಿಕ ವಿಜ್ಞಾನಗಳು ಔದ್ಯೋಗಿಕ ಸವಾಲುಗಳನ್ನು ಎದುರಿಸಬೇಕಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿ ಉತ್ತೀರ್ಣರಾಗುವುದರೊಂದಿಗೆ ಉದ್ಯೋಗವಕಾಶಗಳನ್ನು ಪಡೆಯಲು ಸಾಧ್ಯವಾಗುವುದು ಎಂದು ಮುನಿಯಾಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಮಂಜುನಾಥ ಆಚಾರಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ವಿದ್ಯಾಧರ ಹೆಗ್ಡೆ ಎಸ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿ ಅಧಿಕಾರಿ ಸುಷ್ಮಾ ರಾವ್ ಕೆ, ಐ.ಕ್ಯೂ ಎ.ಸಿ ಸಂಚಾಲಕ ಡಾ.ಗಣೇಶ್ ಎಸ್, ಸಂಘದ ಸದಸ್ಯರಾದ ಪ್ರಾಧ್ಯಾಪಕ ಪದ್ಮನಾಭ ಶೆಟ್ಟಿ, ಸಂಘದ ಕಾರ್ಯದರ್ಶಿ ಶ್ರಮಂತ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಚಾಲಕಿ ಸಹಪ್ರಾಧ್ಯಾಪಕಿ ಜ್ಯೋತಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಪವಿತ್ರ ಪಿ ಸೇರ್ವೇಗಾರ್ ವಂದಿಸಿದರು, ವಿದ್ಯಾರ್ಥಿನಿ ಪ್ರಜ್ಞಾ ನಿರೂಪಿಸಿದರು.


