ಹೆಬ್ರಿ : ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳು ಹೆಬ್ರಿ ಹಾಗೂ ಕ್ರೀಡಾ ಭಾರತಿ ಹೆಬ್ರಿ ತಾಲ್ಲೂಕು ಆಶ್ರಯದಲ್ಲಿ ವಿಶ್ವ ಯೋಗ ದಿನಾಚರಣೆ ಭಾನುವಾರ ಸಂಸ್ಥೆಯ ಸಭಾಂಗಣದಲ್ಲಿ ನೆರವೇರಿತು.
ಅಮೃತ ಭಾರತಿ ಟ್ರಸ್ಟ್ ಸದಸ್ಯರಾದ ಯೋಗ ಸಾಧಕ ಹೆಚ್ .ಬಾಲಕೃಷ್ಣ ಮಲ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಮ್ಮ ಪುರಾತನ ಯೋಗದ ಪ್ರಯೋಜನಗಳು ಬೆಟ್ಟದಷ್ಟು. ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಋಷಿ ಮುನಿಗಳು ನೀಡಿದ ಯೋಗ ಕೊಡುಗೆ ಇಂದು ವಿಶ್ವ ಮಾನ್ಯತೆ ಪಡೆದದ್ದು ಸಂತೋಷ ಎಂದರು.
ಸಭಾ ಅಧ್ಯಕ್ಷತೆ ವಹಿಸಿದ್ದ ಕ್ರೀಡಾ ಭಾರತಿಯ ಗೌರವಾಧ್ಯಕ್ಷರಾದ ಅಮೃತ ಭಾರತಿ ಟ್ರಸ್ಟ್ ಕಾರ್ಯದರ್ಶಿ ಗುರುದಾಸ ಶೆಣೈ ಮಾತನಾಡಿ, ಪತಂಜಲಿ ಮಹರ್ಷಿಗಳು ನೀಡಿದ ಅಷ್ಟಾಂಗ ಯೋಗಗಳನ್ನು ಮೈಗೂಡಿಸಿಕೊಂಡರೆ ನಮ್ಮ ಜೀವನ ಸಂಪೂರ್ಣ ಪರಿಪಕ್ವವಾಗುತ್ತದೆ. ವಿದ್ಯಾರ್ಥಿಗಳು ನಿತ್ಯ ಯೋಗ ಮಾಡಿ ಉತ್ತಮ ಅಂಕ ಗಳಿಸಿಕೊಳ್ಳುವುದರ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಜೋಗಿ,ಕ್ರೀಡಾ ಭಾರತಿ ಸದಸ್ಯರಾದ ಪ್ರವೀಣ್ ಹೆಗ್ಡೆ , ನಿಶಾನ್, ರವೀಂದ್ರ ಶೆಟ್ಟಿ, ಮಾಲಿನಿ, ಪಾವನ, ನಿಲಯ ಪಾಲಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕ್ರೀಡಾ ಭಾರತಿ ಹೆಬ್ರಿ ತಾಲ್ಲೂಕು ಕಾರ್ಯದರ್ಶಿಯಾದ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯ ಪಿಆರ್ ಓ ವಿಜಯ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಚೀಫ್ ವಾರ್ಡನ್ ವಿರೂಪಾಕ್ಷ ನಿರೂಪಿಸಿ, ಜಂಬಯ್ಯ ವಂದಿಸಿದರು.
ವಿಜಯ್ ಕುಮಾರ್ ಶೆಟ್ಟಿ ಮಾರ್ಗದರ್ಶನದಲ್ಲಿ ಯೋಗ ಆಸನಗಳು ಮತ್ತು ಪ್ರಾಣಾಯಾಮ ಮಾಡಿಸಲಾಯಿತು.



