ಹೆಬ್ರಿ : ಹೆಬ್ರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ೨೦೨೬-೨೭ನೇ ಸಾಲಿನ “ಚೇತನ ಗ್ರಾಹಕ ಕ್ಲಬ್” ಆಶ್ರಯದಲ್ಲಿ ವಿದ್ಯಾರ್ಥಿಗಳಲ್ಲಿ ಕಾನೂನು ಸಾಕ್ಷರತೆ ಮತ್ತು ನಾಗರಿಕ ಜವಾಬ್ದಾರಿಯನ್ನು ಮೂಡಿಸುವ ಸದುದ್ದೇಶದಿಂದ “ಮಾಹಿತಿ ಹಕ್ಕು ಮತ್ತು ಕರ್ತವ್ಯ ಕಾರ್ಯಾಗಾರ” ವನ್ನು ಶನಿವಾರ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಯ ಅಧ್ಯಕ್ಷ ಸೀತಾನದಿ ವಿಜೇಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಪಬ್ಲಿಕ್ ಸ್ಕೂಲ್ ಮುನಿಯಾಲಿನ ಹಿರಿಯ ಶಿಕ್ಷಕ ಲಕ್ಷ್ಮೀನಾರಾಯಣ ಬೋರ್ಕರ್ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು. ಮಾಹಿತಿ ಹಕ್ಕು ಅಧಿನಿಯಮ 2005 ರ ಬಗ್ಗೆ ಮಾತನಾಡಿ ಮಾಹಿತಿ ಹಕ್ಕನ್ನು ಅರಿಯೋಣ ಕರ್ತವ್ಯವನ್ನು ನಿಭಾಯಿಸೋಣ” ಎಂಬ ಧ್ಯೇಯದೊಂದಿಗೆ ಮಾಹಿತಿ ಹಕ್ಕು ಕಾಯ್ದೆಯ ಬಳಕೆ ಮತ್ತು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಎಂದರು. ಪ್ರಜಾಪ್ರಭುತ್ವದಲ್ಲಿ ಜಾಗೃತ ಪ್ರಜೆಯೇ ಬಹುದೊಡ್ಡ ಆಸ್ತಿ. ಈ ಬಗ್ಗೆ ಎಲ್ಲರಲ್ಲಿ ಜಾಗೃತಿ ಮೂಡಿಸಿದಾಗ, ಆ ಹಕ್ಕಿನ ಚಲಾವಣೆಯಾದಾಗ ನ್ಯಾಯಸಮ್ಮತ ವ್ಯವಸ್ಥೆ ರೂಪುಗೊಳ್ಳುತ್ತದೆ ಎಂದು ಹಲವು ಯಶಸ್ವಿ ಉದಾಹರಣೆಗಳ ಮೂಲಕ ಸರಳವಾಗಿ ವಿದ್ಯಾರ್ಥಿಗಳಿಗೆ ಲಕ್ಷ್ಮೀನಾರಾಯಣ ಬೋರ್ಕರ್ ಮನವರಿಕೆ ಮಾಡಿಕೊಟ್ಟರು.
ಶಾಲೆಯ ಉಪ ಪ್ರಾಂಶುಪಾಲ ದಿವಾಕರ ಮರಕಾಲ ಎಸ್., ಗ್ರಾಹಕ ಕ್ಲಬ್ ವಿದ್ಯಾರ್ಥಿ ಅಧ್ಯಕ್ಷೆ ಲಕ್ಷ್ಮಿಶ್ರೀ, ಉಪಾಧ್ಯಕ್ಷೆ ಯಜ್ಞ ಉಪಸ್ಥಿತರಿದ್ದರು. ಚೇತನ ಗ್ರಾಹಕ ಕ್ಲಬ್ ಮಾರ್ಗದರ್ಶಿ ಶಿಕ್ಷಕ ಶಶಿಧರ ಆಚಾರ್ ಸ್ವಾಗತಿಸಿದರು. ನಿರೂಪಣೆಯನ್ನು ಕ್ಲಬ್ ಸದಸ್ಯೆ ಅಕ್ಷತಾ ಮಾಡಿದರು. ಸದಸ್ಯ ಪದ್ಮಪ್ರಸಾದ್ ವಂದಿಸಿದರು.


