ಹೆಬ್ರಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಜೇಸಿಐ ಹೆಬ್ರಿ ಘಟಕದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾದ “ಯಶಸ್ಸಿನ ಹೆಜ್ಜೆ” ಜೀವನವನ್ನು ಬದಲಾಯಿಸುವ ಅದ್ಭುತ ಸೂತ್ರಗಳು ಎಂಬ ವಿಶೇಷ ಪ್ರೇರಣಾದಾಯಕ ತರಬೇತಿ ಕಾರ್ಯಕ್ರಮವು ಶನಿವಾರ ಜರುಗಿತು.
ಉಪ ಪ್ರಾಂಶುಪಾಲ ದಿವಾಕರ ಮರಕಾಲ ಎಸ್. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ “ವಿದ್ಯಾರ್ಥಿ ದೆಸೆಯಲ್ಲಿಯೇ ಇಂತಹ ಉತ್ತಮ ತರಬೇತಿ ಕಾರ್ಯಕ್ರಮಗಳು ದೊರೆತಾಗ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಜ್ಞಾನ, ಪ್ರೇರಣೆ ಮತ್ತು ಉತ್ತಮ ಅಭ್ಯಾಸಗಳನ್ನು ಜೀವನದಲ್ಲಿ ರೂಢಿಸಿಕೊಂಡಾಗ ಮಾತ್ರ ಯಶಸ್ಸಿನ ಶಿಖರವನ್ನು ತಲುಪಬಹುದು” ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಅಧ್ಯಕ್ಷತೆಯನ್ನು ಜೇಸಿಐ ಹೆಬ್ರಿ ಘಟಕದ ಅಧ್ಯಕ್ಷ ಸತೀಶ ಕುಲಾಲ್ ಮಾತನಾಡಿ ಜೇಸಿಐ ಸಂಸ್ಥೆಯು ಸದಾ ಸಮಾಜದ ಯುವಶಕ್ತಿಯನ್ನು ಸಬಲೀಕರಣಗೊಳಿಸುವ ಹಾಗೂ ಅವರ ನಾಯಕತ್ವದ ಗುಣಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಂತಹ ಸತ್ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ತರಬೇತಿಯ ಸದುಪಯೋಗವನ್ನು ಪಡೆದು ಪ್ರತಿಯೊಬ್ಬ ವಿದ್ಯಾರ್ಥಿಯೂ ಸಾಧಕರಾಗಬೇಕು ಎಂದರು.
ಯಶಸ್ಸಿನ ಗುಟ್ಟು (The Secret of Success): ಮೂಡುಬಿದಿರೆಯ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಮಾನಸ ರೋಗ ವಿಭಾಗದ ಪ್ರಾಧ್ಯಾಪಕ ಮುಖ್ಯಸ್ಥರಾದ ಜೇಸಿಐ ವಲಯ ತರಬೇತಿದಾರ ಡಾ. ರವಿಪ್ರಸಾದ್ ಹೆಗ್ಡೆ ವಿದ್ಯಾರ್ಥಿಗಳಿಗೆ ಯಶಸ್ಸಿನ ರಹಸ್ಯಗಳ ಮಾಹಿತಿ ನೀಡಿದರು.
ವೈಫಲ್ಯವನ್ನು ಎದುರಿಸುವುದು (Facing Failure) : ಜೇಸಿಐ ವಲಯ ತರಬೇತಿದಾರ ಪ್ರಕಾಶ ಪೂಜಾರಿ ಸೋಲುಗಳನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆಯುವ ಕುರಿತು ತರಬೇತಿ ನೀಡಿದರು.ಕ್ರಿಟಿಕಲ್ ಥಿಂಕಿಂಗ್ (Critical Thinking) : ಜೇಸಿಐ ರಾಷ್ಟ್ರೀಯ ತರಬೇತಿದಾರರಾದ ಅರುಣಾ ಎಸ್. ವಿಮರ್ಶಾತ್ಮಕವಾಗಿ ಯೋಚಿಸುವ ವಿಧಾನಗಳ ಬಗ್ಗೆ ತಿಳಿಸಿಕೊಟ್ಟರು.
ಉತ್ತಮ ಅಭ್ಯಾಸಗಳು (Good Habits) : ಜೇಸಿಐ ವಲಯ ತರಬೇತಿದಾರ ಉದಯ ನಾಯ್ಕ್ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಸತ್ಪ್ರವೃತ್ತಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ತರಬೇತುದಾರರಾದ ಡಾ. ರವಿಪ್ರಸಾದ್ ಹೆಗ್ಡೆ, ಪ್ರಕಾಶ ಪೂಜಾರಿ, ಅರುಣಾ ಎಸ್. ಉದಯ ನಾಯ್ಕ್, ಜೇಸಿಐ ವಲಯಾಧಿಕಾರಿ ಸೋನಿ ಪಿ. ಶೆಟ್ಟಿ, ಕಾಲೇಜಿನ ಹಿರಿಯ ಶಿಕ್ಷಕ ವೆಂಕಟರಮಣ ಕಲ್ಕೂರ್, ಜೇಸಿಐ ಹೆಬ್ರಿ ಘಟಕದ ಕಾರ್ಯದರ್ಶಿ ಸುನೀತಾ ಹೆಬ್ಬಾರ್, ಜೆಜೆಸಿ ವಿಭಾಗದ ಚೈತನ್ಯ ಉಪಸ್ಥಿತರಿದ್ದರು.
ಪ್ರವೀಣ ಕುಮಾರ ಶೆಟ್ಟಿ ಸ್ವಾಗತಿಸಿದರು. ಮಂಜುನಾಥ ಕುಲಾಲ್ ವೇದಿಕೆಗೆ ಆಹ್ವಾನಿಸಿದರು. ಪ್ರಣತಿ ಶೆಟ್ಟಿ ಜೇಸಿ ವಾಣಿ ವಾಚಿಸಿದರು. ಅನಿತಾ ಪಿ. ಶೆಟ್ಟಿ ವಂದಿಸಿದರು.




