ಹೆಬ್ರಿ : ಹೆಬ್ರಿ ತಾಲ್ಲೂಕು ಕುಲಾಲ ಸಂಘದ ವತಿಯಿಂದ ೨ನೇ ವರ್ಷದ ‘ಆಟಿಡೊಂಜಿ ಕುಲಾಲ ಕೂಟ–2026’ ಕಾರ್ಯಕ್ರಮ ಇತ್ತೀಚೆಗೆ ಹೆಬ್ರಿಯ ಚೈತನ್ಯ ಸಭಾಭವನದಲ್ಲಿ ಸಂಭ್ರಮೋಲ್ಲಾಸ ಹಾಗೂ ಸಾಂಸ್ಕೃತಿಕ ಮೆರುಗಿನೊಂದಿಗೆ ಜರುಗಿತು.
ಸಂಘದ ಗೌರವಾಧ್ಯಕ್ಷರಾದ ಭೋಜ ಕುಲಾಲ್ ಬೇಳಂಜೆ ಸಮಾಜದ ಒಗ್ಗಟ್ಟು ಮತ್ತು ಸಂಘಟನೆಯ ಬೆಳವಣಿಗೆಯ ಬಗೆಗೆ ಮಾತನಾಡಿದರು. ಮೂಡಬಿದಿರೆಯ ಆಳ್ವಾಸ್ ಡಿಗ್ರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಚೈತ್ರ ವಿಶ್ವನಾಥ್ ಕುಲಾಲ್ ಮಾತನಾಡಿ, “ಆಟಿ ತಿಂಗಳು ಎಂದರೆ ಕಷ್ಟದ ಸಮಯವಲ್ಲ. ಬದಲಾಗಿ ಅದು ನಮಗೆ ಆರೋಗ್ಯ, ತಾಳ್ಮೆ ಹಾಗೂ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಹೇಗೆ ಬದುಕಬೇಕು ಎಂಬುದನ್ನು ತಿಳಿಸಿಕೊಡುವ ವಿಶೇಷ ಕಾಲಘಟ್ಟವಾಗಿದೆ,” ಎಂದು ಆಟಿ ಆಚರಣೆಯ ಮಹತ್ವವನ್ನು ವಿವರಿಸಿದರು.
ಬನಶಂಕರಿ ಉದ್ಯಮ ಸಂಸ್ಥೆಯ ಐತು ಕುಲಾಲ್ ಕನ್ಯಾನ ಅವರು ಆಟಿ ತಿಂಗಳ ಸಾಂಪ್ರದಾಯಿಕ ಆಚರಣೆಗಳು, ನಿಯಮಗಳು ಹಾಗೂ ಅವುಗಳ ಹಿಂದಿರುವ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಉದ್ದೇಶಗಳ ಮಾಹಿತಿ ನೀಡಿದರು.
ಕಾರ್ಕಳ ಕುಲಾಲ ಸಂಘದ ಅಧ್ಯಕ್ಷ ಹರಿಶ್ಚಂದ್ರ ಕುಲಾಲ್ ಮಾತನಾಡಿ, “ಹೆಬ್ರಿ ತಾಲ್ಲೂಕು ಕುಲಾಲ ಸಂಘವು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಹಲವು ಸಾಮಾಜಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಮ್ಮಿಕೊಳ್ಳುತ್ತಿದೆ,” ಎಂದರು.
ಸಭಾಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಸುರೇಂದ್ರ ಕುಲಾಲ್ ಮಾತನಾಡಿ “ಆರಂಭದಲ್ಲಿ ಕೆಲವೇ ಜನರು ಸೇರಿ ಮನೆಯಿಂದಲೇ ಅಡುಗೆ ಮಾಡಿ ತಂದು ಅತ್ಯಂತ ಸರಳವಾಗಿ ಈ ಕಾರ್ಯಕ್ರಮವನ್ನು ನಡೆಸಬೇಕೆಂಬ ಯೋಜನೆಯಿತ್ತು. ಆದರೆ ಇಂದು ಪ್ರತಿಯೊಬ್ಬರ ಅಭೂತಪೂರ್ವ ಸಹಕಾರದಿಂದ ಇದು ಇಷ್ಟೊಂದು ಬೃಹತ್ ಮಟ್ಟದ ಕಾರ್ಯಕ್ರಮವಾಗಿ ರೂಪುಗೊಂಡಿರುವುದು ಸಂತಸ ತಂದಿದೆ,” ಎಂದು ಹರ್ಷ ವ್ಯಕ್ತಪಡಿಸಿದರು.
ಹೆಬ್ರಿ ಜೇಸಿಐ ಅಧ್ಯಕ್ಷ ಸತೀಶ್ ಕುಲಾಲ್, ಕುಲಾಲ ಮುಖಂಡರಾದ ರಾಜು ಕುಲಾಲ್ ಕೆ.ಎಸ್. ಮುದ್ರಾಡಿ, ಅನ್ನಪ್ಪ ಕುಲಾಲ್ ದುಳ್ಳಿ, ಜಯರಾಮ್ ಹಾಂಡ ಬೇಳಂಜೆ, ಸುನಂದಾ ಕುಲಾಲ್ ಮುಳ್ಳುಗುಡ್ಡೆ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು, ಸಮಾಜ ಬಾಂಧವರು ಉಪಸ್ಥಿತರಿದ್ದರು.
ಸಮಾಜ ಬಾಂಧವರ ಒಗ್ಗಟ್ಟು, ತುಳುನಾಡಿನ ಸಾಂಪ್ರದಾಯಿಕ ವೈಭವ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಮೂಲಕ ಈ ಆಟಿಡೊಂಜಿ ಕುಲಾಲ ಕೂಟ–2026 ಕಾರ್ಯಕ್ರಮವು ಅತ್ಯಂತ ಅರ್ಥಪೂರ್ಣವಾಗಿ ಸಂಪನ್ನಗೊಂಡಿತು.
ವನಿತಾ ಕುಲಾಲ್ ಸ್ವಾಗತಿಸಿದರು. ರಚಿತ ಕುಲಾಲ್ ವಂದಿಸಿದರು. ವಂದನಾ ಕುಲಾಲ್ ನಿರೂಪಿಸಿದರು.


