ಹೆಬ್ರಿ : ಅಧಿಕ ಮಾಸದ ವಿಶೇಷ ಸೇವೆ : 350 ಕ್ಕೂ ಹೆಚ್ಚು ಭಕ್ತರಿಂದ 3.45 ಲಕ್ಷ ಪ್ರದಕ್ಷಿಣೆ ಸಮರ್ಪಣೆ.
ಹೆಬ್ರಿ ನ್ಯೂಸ್ – ಸುಕುಮಾರ್ ಮುನಿಯಾಲ್
ಹೆಬ್ರಿ : 1 ಸಾವಿರ ವರ್ಷಗಳ ಐತಿಹಾಸಿಕ ಹಿನ್ನಲೆಯ ಹೆಬ್ರಿ ಶ್ರೀ ಅನಂತಪದ್ಮನಾಭ ದೇವರಿಗೆ ಅಧಿಕ ಜೇಷ್ಠ ಪುರುಷೋತ್ತಮ ಮಾಸದಲ್ಲಿ ಭಕ್ತರೆಲ್ಲಾ ಸೇರಿ ನಡೆಸಿದ ಲಕ್ಷಾಧಿಕ ಪ್ರದಕ್ಷಿಣೆ ನಮಸ್ಕಾರಗಳನ್ನು ಶ್ರೀ ಲಕ್ಷ್ಮಿಅನಂತಪದ್ಮನಾಭನಿಗೆ ಸಮರ್ಪಿಸುವ ಕಾರ್ಯಕ್ರಮವು ಮಿಥುನ ಸಂಕ್ರಮಣದಂದು ಸೋಮವಾರ ನಡೆಯಿತು.
ಅಧಿಕ ಮಾಸಾಚರಣೆ ಹಾಗೂ ಶ್ರೀ ಅನಂತ ಪದ್ಮನಾಭ ದೇವರ ಸಂಪ್ರೀತಿಗಾಗಿ ಮೇ17ರಂದು ಆರಂಭಗೊಂಡ ” ಲಕ್ಞಾಧಿಕ ಪ್ರದಕ್ಷೀಣೆ ನಮಸ್ಕಾರ ” ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಹೊತ್ತಿಗೆ ಭಕ್ತರು ತಮ್ಮ ಅನುಕೂಲದಂತೆ 33 ನಾಮಗಳನ್ನು ಪಠಿಸುತ್ತ 33 ಪ್ರದಕ್ಷಿಣೆಗಳನ್ನು ಹಾಕುತ್ತಿದ್ದರು. ಅಧಿಕ ಮಾಚರಣೆಯ ಈ ವಿಶೇಷ ಆಚರಣೆ ಧಾರ್ಮಿಕ ವ್ಯವಸ್ಥೆಯಲ್ಲಿ ವಿಶೇಷವಾಗಿ ನಡೆದಿದೆ.

ಲಕ್ಷಾಧಿಕ ಪ್ರದಕ್ಷಿಣೆಯ ಸಮರ್ಪಣೆಯ ಪ್ರಯುಕ್ತ ಸೋಮವಾರ ಶ್ರೀದೇವರಿಗೆ ಪಂಚಾಮೃತ ಅಭಿಷೇಕ ಪೂರ್ವಕ ಕಲಶಾಭಿಷೇಕ, 33 ನಾಮಾವಳಿಯ ಅರ್ಚನೆ, 33 ಅವಧಾನ ಸೇವೆ, 33 ಆರತಿಗಳೊಂದಿಗೆ ಮಹಾಪೂಜೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು. ಪ್ರದಕ್ಷಿಣೆ ಸೇವೆ ಮಾಡಿದ 350 ಕ್ಕೂ ಹೆಚ್ಚು ಭಕ್ತರಿಂದ ಕೃಷ್ಣಾರ್ಪಣೆ ನಡೆಯಿತು.
ದೇವಸ್ಥಾನದ ಉಳಿವಿಗಾಗಿ ಸಂಪ್ರಾರ್ಥನೆ : ಉಡುಪಿ ಹೆಬ್ರಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯು ದೇವಸ್ಥಾನದ ಪಕ್ಕದಲ್ಲೇ ಹಾದು ಹೋಗುತ್ತಿದೆ. ಹೆದ್ದಾರಿ ನಿರ್ಮಾಣದಿಂದ ದೇವಸ್ಥಾನದ ಜಾಗವೂ ಹೆದ್ದಾರಿಗೆ ಹೋಗುತ್ತಿದೆ. ಇದರಿಂದಾಗಿ ಕಾರ್ಯಚಟುವಟಿಕೆಗಳಿಗೆ ಅಡ್ಡಿಯಾಗುತ್ತದೆ. ದೇವಸ್ಥಾನಕ್ಕೆ ಯಾವೂದೇ ತೊಂದರೆಯಾಗದಂತೆ ಹೆದ್ದಾರಿಯ ನಿರ್ಮಾಣವಾಗಲಿ ಎಂದು ಶ್ರೀ ಅನಂತಪದ್ಮನಾಭದೇವರಲ್ಲಿ ವಿಶೇಷವಾಗಿ ಪ್ರಾರ್ಥಿಸಿ ಭಕ್ತ ಸಮೂಹದ ಮೂಲಕ 1ತಿಂಗಳ ಕಾಲ ನಡೆಸಿದ ಲಕ್ಷಾಧಿಕ ಪ್ರದಕ್ಷಿಣೆ ನಮಸ್ಕಾರವು ಇಂದು ಶ್ರೀ ದೇವರಿಗೆ ಸಮರ್ಪಿಸಲಾಗಿದೆ ಎಂದು ಕ್ಷೇತ್ರದ ಅನುವಂಶಿಕ ಆಡಳಿತ ಮೋಕ್ತೇಸರ ಎಚ್. ತಾರಾನಾಥ ಬಲ್ಲಾಳ್ ತಿಳಿಸಿದರು. ಹೆಬ್ರಿ ಬೀಡು ದಿ. ಸರೋಜಾ. ಎಂ. ಹೆಗ್ಡೆ ಸ್ಮರಣಾರ್ಥ ಅವರ ಪತಿ ಡಾ. ಮನೋರಂಜನ್ ದಾಸ್ ಹೆಗ್ಡೆ ಹಾಗೂ ಮಕ್ಕಳಿಂದ ಸೇವೆಯ ಅನ್ನಸಂತರ್ಪಣೆ ನೆರವೇರಿತು. ತಂತ್ರಿಗಳು ಅರ್ಚಕರು ವಿಶೇಷ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಕ್ಷೇತ್ರದ ಅನುವಂಶಿಕ ಆಡಳಿತ ಮೋಕ್ತೇಸರ ಎಚ್.ತಾರಾನಾಥ ಬಲ್ಲಾಳ್. ಸಮಿತಿಯ ಸದಸ್ಯರು, ಸಾವಿರಾರು ಭಕ್ತಸಮೂಹ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.


