ಶಿವಪುರ : ಹೆಬ್ರಿ ತಾಲೂಕಿನ ಶಿವಪುರ – 1 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಕ್ಷದ್ರುವ ಪಟ್ಲ ಫೌಂಡೇಶನ್ (ರಿ.), ಮಂಗಳೂರು – ಕಾರ್ಕಳ ಘಟಕದ ಪ್ರಾಯೋಜಕತ್ವದಲ್ಲಿ ಯಕ್ಷ ಶಿಕ್ಷಣ ತರಗತಿಗಳ ಉದ್ಘಾಟನಾ ಸಮಾರಂಭ ಹಾಗೂ ಶಾಲಾ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಕೊಡುಗೆಗಳ ವಿತರಣಾ ಕಾರ್ಯಕ್ರಮ ಸೋಮವಾರ ನಡೆಯಿತು.
ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಐಡಿ ಕಾರ್ಡ್, ಬೆಲ್ಟ್, ಎಲ್ಕೆಜಿ ಹಾಗೂ ಯುಕೆಜಿ ತರಗತಿಗಳಿಗೆ ಪೀಠೋಪಕರಣಗಳು, ಶಾಲಾ ಆವರಣಕ್ಕೆ ನುಡಿಮುತ್ತುಗಳ ನಾಮಫಲಕಗಳು ವಿತರಿಸಲಾಯಿತು.
ಸಮಾಜಮುಖಿ ಸೇವೆ ಸಲ್ಲಿಸಿದ ಸಾಧಕರು ಮತ್ತು ದಾನಿಗಳನ್ನು ಗೌರವಿಸಿ ಅಭಿನಂದಿಸಲಾಯಿತು.
ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಯಡ್ದೆ ರಾಘವೇಂದ್ರ ಪೂಜಾರಿ ವಹಿಸಿದ್ದರು.
ಕಾರ್ಯಕ್ರಮವನ್ನು ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ನಿವೃತ್ತ ನಿರ್ದೇಶಕ ಬಿ. ಸದಾಶಿವ ಪ್ರಭು ಉದ್ಘಾಟಿಸಿದರು.
ಯಕ್ಷಗಾನ ಕಲೆಯ ಸಂರಕ್ಷಣೆ ಮತ್ತು ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಆಸಕ್ತಿ ಬೆಳೆಸುವ ಉದ್ದೇಶದಿಂದ ಆರಂಭಗೊಂಡಿರುವ ಯಕ್ಷ ಶಿಕ್ಷಣ ತರಗತಿಗಳು ಹಾಗೂ ಶಾಲೆಗೆ ನೀಡಲಾದ ವಿವಿಧ ಶೈಕ್ಷಣಿಕ ಕೊಡುಗೆಗಳು ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಯಿತು.
ಉಡುಪಿ ಜಿಲ್ಲಾಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಅಶೋಕ್ ಕುಮಾರ್ , ಯಕ್ಷದ್ರುವ ಪಟ್ಲ ಫೌಂಡೇಶನ್ ಗೌರವ ಕಾರ್ಯದರ್ಶಿ ರೋಟೇರಿಯನ್ ಆರೂರು ತಿಮ್ಮಪ್ಪ ಶೆಟ್ಟಿ, ಸೋಮೇಶ್ವರ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಡಾ. ರಶ್ಮಿ , ಯಕ್ಷದ್ರುವ ಪಟ್ಲ ಫೌಂಡೇಶನ್, ಕಾರ್ಕಳ ಘಟಕದ ಸಂಚಾಲಕ ಮಹಾವೀರ ಪಾಂಡೆ, ನಿವೃತ್ತ ಮುಖ್ಯ ಶಿಕ್ಷಕ ಹರಿದಾಸ ಹೆಗ್ಡೆ,
ಉದ್ಯಮಿ ಅಜಿತ್ ಕುಮಾರ್ ಶೆಟ್ಟಿ, ಶೀವಪುರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ , ಹೆಬ್ರಿ ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ರಮೇಶ್ ಕುಮಾರ್ ಶಿವಪುರ, ಯಕ್ಷ ಗುರು ಮಹೇಶ್ ಕುಮಾರ್ ಮಂದಾರ್ತಿ, ಶಿವಪುರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಶೋಭಾ ಶೆಟ್ಟಿ, ಶೇಖರ ಶೆಟ್ಟಿ, ಶಿವಪುರ ಸಮೂಹ ಸಂಪನ್ಮೂಲ ವ್ಯಕ್ತಿ ಪ್ರೀತೀಶ್ ಕುಮಾರ್ ಶೆಟ್ಟಿ,
ಉದ್ಯಮಿ ಗಣೇಶ್ ಕುಲಾಲ್ ಶಿವಪುರ ಉಪಸ್ಥಿತರಿದ್ದರು.
ಶಾಲಾ ಮುಖ್ಯಶಿಕ್ಷಕಿ ಗುಲಾಬಿ ಸ್ವಾಗತಿಸಿದರು. ಅಧ್ಯಾಪಕ ರಮಾನಂದ ಶೆಟ್ಟಿ ನಿರೂಪಿಸಿದರು. ಶಾಲೆಯ ಅಧ್ಯಾಪಕ ವೃಂದ ಕಾರ್ಯಕ್ರಮದ ಸಂಯೋಜನೆಯಲ್ಲಿ ಸಹಕರಿಸಿದರು. ಅಧ್ಯಾಪಕಿ ವೀಣಾ ಕುಮಾರಿ ಎಚ್.ಎನ್ ವಂದಿಸಿದರು.



