ಹೆಬ್ರಿ :ಅಮೃತ ಭಾರತಿ ವಿದ್ಯಾ ಕೇಂದ್ರದ ಸಭಾಂಗಣದಲ್ಲಿ “ಕಾರ್ಗಿಲ್ ವಿಜಯ ದಿವಸ”ವನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಅಮೃತ ಭಾರತಿ ವಿದ್ಯಾ ಕೇಂದ್ರದ ಅಧ್ಯಕ್ಷ ಗುರುದಾಸ್ ಶೆಣೈ, ಟ್ರಸ್ಟ್ ಹಿರಿಯ ಸದಸ್ಯರಾದ ಬಾಲಕೃಷ್ಣ ಮಲ್ಯ ಹಾಗೂ ನಿವೃತ್ತ ಮಿಲಿಟರಿ ಅಧಿಕಾರಿ ಸಾಧು ಕುಂದರ್ ಮತ್ತು ರಮಾನಂದ ಅವರು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು, ಭಾರತಾಂಬೆಗೆ ನಮನ ಸಲ್ಲಿಸಿದರು.
ಅಮೃತ ಭಾರತಿ ವಿದ್ಯಾ ಕೇಂದ್ರದ ಪ್ರಾಂಶುಪಾಲ ಅರುಣ್ ಮತ್ತು ಅಮೃತ ಭಾರತಿ ಸಮೂಹ ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯ್ ಕುಮಾರ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ನಿವೃತ್ತ ಅಧಿಕಾರಿ ಸಾಧು ಕುಂದರ್ ಅವರು, “ಭಾರತವೇ ಅಮೃತ, ಅಮೃತದಲ್ಲಿ ಭಾರತಿ” ಎಂದು ಅಮೃತ ಭಾರತಿಯನ್ನು ಶ್ಲಾಘಿಸಿದರು. “ನೀರಿಲ್ಲದೆ, ಊಟವಿಲ್ಲದೆ ಕರ್ತವ್ಯ ನಿರ್ವಹಿಸುವ ವಿಶ್ವದ ಏಕೈಕ ಸೇನೆ ನಮ್ಮ ಭಾರತೀಯ ಸೇನೆ. ತಂದೆ-ತಾಯಿ, ಪತ್ನಿ-ಮಕ್ಕಳನ್ನು ಮರೆತು ದೇಶ ರಕ್ಷಿಸುವ ಮಹಾನ್ ಹೊಣೆಗಾರಿಕೆ ಸೈನಿಕನದ್ದು” ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.
ವಾಯುಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ರಮಾನಂದ ಅವರು, “ನಾವು ನಮ್ಮ ಕರ್ತವ್ಯವನ್ನು ನಿಭಾಯಿಸಿದ್ದೇವೆ. ವಿದ್ಯಾರ್ಥಿಗಳಾದ ನೀವು ನಿಮ್ಮ ಕರ್ತವ್ಯಕ್ಕೆ ಬದ್ಧರಾಗಿ, ಅನಿವಾರ್ಯ ಸಂದರ್ಭದಲ್ಲಿ ದೇಶ ಸೇವೆಗೆ ಸಿದ್ಧರಾಗಿರಿ” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸೈನಿಕರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಟ್ರಸ್ಟ್ ಕಾರ್ಯದರ್ಶಿ ಗುರುದಾಸ್ ಶೆಣೈ ಅವರು, “ದೇಶದಲ್ಲಿ ನಾವು ನೆಮ್ಮದಿಯಿಂದ ಮಲಗಲು ಕಾರಣ ನಮ್ಮ ಸೈನಿಕರು. ಅವರ ಪರಿಶ್ರಮ, ಪ್ರಾಮಾಣಿಕತೆ ಶ್ಲಾಘನೀಯ. ಅಸಂಖ್ಯಾತ ಯೋಧರು ದೇಶಕ್ಕಾಗಿ ಹುತಾತ್ಮರಾಗಿದ್ದಾರೆ. ಅವರ ತ್ಯಾಗವನ್ನು ಪ್ರತಿದಿನ ನಾವು ನೆನಪಿಸಿಕೊಳ್ಳಬೇಕು” ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.
ಸಹಶಿಕ್ಷಕಿ ಪ್ರೀತಿಕಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಆಯುಷ್ ಆರ್ ಕಾರ್ಗಿಲ್ ಯುದ್ಧದ ಕುರಿತು ಮಾತನಾಡಿದರು. ಸಂಸ್ಕೃತಿ ಯು. ಹೆಗ್ಡೆ ನಿರೂಪಿಸಿದರು. ಯೋಗನಿಹಾರಿಕ ಸ್ವಾಗತಿಸಿದರು. ಶ್ರೀ ವರ್ಧನ್ ವಂದಿಸಿದರು. ವಿದ್ಯಾ ಕೇಂದ್ರದ ಎಲ್ಲಾ ಮಾತಾಜಿ-ಗುರೂಜಿಯವರು ಉಪಸ್ಥಿತರಿದ್ದರು.


