ಹೆಬ್ರಿ: ಎಸ್. ಆರ್. ಪದವಿ ಪೂರ್ವ ಕಾಲೇಜು, ಹೆಬ್ರಿಯ ಸಾಹಿತ್ಯ ಸಂಘದ ವತಿಯಿಂದ ಶನಿವಾರ ಕಾಲೇಜಿನ ಎಸ್. ಆರ್. ಸಭಾಂಗಣದಲ್ಲಿ “English Board Booster Programme” ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ನಿವೃತ್ತ ಪ್ರಾಂಶುಪಾಲರಾದ ಎಸ್.ವಿ.ಎಚ್. ಪದವಿ ಪೂರ್ವ ಕಾಲೇಜು, ಇನ್ನಂಜೆಯ ಮಾಜಿ ಪ್ರಾಂಶುಪಾಲರಾದ ಶ್ರೀ ಪುಂಡರೀಕಾಕ್ಷ ಕೊಡಂಚ ಅವರು ಉದ್ಘಾಟಿಸಿದರು.
ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಯನ್ನು ಕೇವಲ ಪರೀಕ್ಷೆಯಲ್ಲಿ ಅಂಕ ಗಳಿಸುವ ವಿಷಯವೆಂದು ಪರಿಗಣಿಸದೆ, ದೈನಂದಿನ ಜೀವನದಲ್ಲಿ ಬಳಸುವ ಮೂಲಕ ಭಾಷಾ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು. ಇಂಗ್ಲಿಷ್ ಭಾಷೆಯ ಓದು, ಬರವಣಿಗೆ, ಕೇಳುವಿಕೆ ಮತ್ತು ಮಾತನಾಡುವಿಕೆಯ ಕೌಶಲ್ಯಗಳನ್ನು ನಿರಂತರ ಅಭ್ಯಾಸದ ಮೂಲಕ ಬೆಳೆಸಿಕೊಳ್ಳಬೇಕು. ಪಠ್ಯಪುಸ್ತಕದ ಪಾಠಗಳನ್ನು ಅರ್ಥಮಾಡಿಕೊಂಡು ಓದುವುದರ ಜೊತೆಗೆ, ವ್ಯಾಕರಣ ಮತ್ತು ಶಬ್ದಭಂಡಾರದ ಮೇಲೆ ಹಿಡಿತ ಸಾಧಿಸಿದರೆ ಬೋರ್ಡ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಸಮಯವನ್ನು ಸಮರ್ಪಕವಾಗಿ ಬಳಸಿಕೊಂಡು ಪ್ರತಿದಿನ ಇಂಗ್ಲಿಷ್ ಭಾಷೆಯ ಅಭ್ಯಾಸಕ್ಕೆ ಸಮಯ ಮೀಸಲಿಡಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್. ಆರ್. ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷರಾದ ಎಚ್. ನಾಗರಾಜ್ ಶೆಟ್ಟಿ ಅವರು ಮಾತನಾಡಿ, “ನಾವು ಕಲಿಯುವ ಭಾಷೆ ತಾಯಿಯ ಸ್ಥಾನದಲ್ಲಿದೆ. ಭಾಷೆಯ ಕಲಿಕೆಗೆ ಹೆಚ್ಚಿನ ಗಮನ ನೀಡಬೇಕು. ಭಾಷೆಯ ಮೇಲೆ ಉತ್ತಮ ಹಿಡಿತ ಸಾಧಿಸಿದರೆ ಇತರ ಎಲ್ಲ ವಿಷಯಗಳ ಅಧ್ಯಯನವೂ ಸುಲಭವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಭಾಷಾ ಕಲಿಕೆಗೆ ವಿಶೇಷ ಆದ್ಯತೆ ನೀಡಬೇಕು,” ಎಂದು ಹೇಳಿದರು.
ಮುಖ್ಯ ಅತಿಥಿ ಶ್ರೀಕಾಂತ್ ವಿ., ಮುಖ್ಯೋಪಾಧ್ಯಾಯರು, ಸಿ.ಎನ್.ಎಸ್.ಎಂ. ಸರ್ಕಾರಿ ಪ್ರೌಢಶಾಲೆ, ಆರ್ಡಿ-ಅಲ್ಬಾಡಿ ಅವರು ಮಾತನಾಡಿ, “ಪರಿಸರದ ಕಾಳಜಿ ಮತ್ತು ಪ್ರಕೃತಿಯ ರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ನಿರಂತರ ಓದುವಿಕೆಯಿಂದ ಜ್ಞಾನ ಮತ್ತು ವ್ಯಕ್ತಿತ್ವದ ಅಭಿವೃದ್ಧಿ ಸಾಧ್ಯ. ಗಿಡ ನೆಡುವ ಹವ್ಯಾಸವನ್ನು ರೂಢಿಸಿಕೊಳ್ಳುವ ಮೂಲಕ ಪರಿಸರವನ್ನು ಸಂರಕ್ಷಿಸಬಹುದು. ಇಂಗ್ಲಿಷ್ ಭಾಷೆಯ ಕಲಿಕೆಯಿಂದ ನಮ್ಮ ಜ್ಞಾನ ಮತ್ತು ಪ್ರತಿಭೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಿಕೊಳ್ಳಲು ಸಾಧ್ಯ,” ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರಶಾಂತ್ ಎಚ್. ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಸಾಹಿತ್ಯ ಸಂಘದ ಸಂಯೋಜಕರಾದ ಮೆಲ್ವಿನ್ ಡಿಸಿಲ್ವಾ ಅವರು ಕಾರ್ಯಕ್ರಮವನ್ನು ಸಂಯೋಜಿಸಿದರು. ಸಾಹಿತ್ಯ ಸಂಘದ ಸದಸ್ಯರಾದ ವನಿತಾ ತೋಳಾರ್ ಹಾಗೂ ಹರ್ಷ ಭಟ್ ಅವರು ಸಹಕರಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಸುವರ್ಣ ನಿರೂಪಿಸಿ, ವಿದ್ಯಾರ್ಥಿನಿ ಸುಪ್ರದಾ ಶೆಟ್ಟಿ ವಂದಿಸಿದರು.




