ಅವರ ಸಾವು ಸಾವಲ್ಲ, ಅಲ್ಲಿ ಅಳಿದದ್ದಕ್ಕಿಂತ ಉಳಿದದ್ದೇ ಹೆಚ್ಚು !
ರಾಜ್ಯದ ಸಜ್ಜನ ರಾಜಕಾರಣದ ಕೊಂಡಿಯೊಂದು ಕಳಚಿ ಹೋಗಿದೆ. ತಮ್ಮ ಸರಳ ನಡೆ ನುಡಿಯ ಮೂಲಕ ಜನಮನಗೆದ್ದಿದ್ದ ದಿ.ಹೆಬ್ರಿ ಗೋಪಾಲ ಭಂಡಾರಿಯವರು ಮುತ್ಸದ್ದಿ, ಸಜ್ಜನ ರಾಜಕಾರಣಿ, ಸ್ವಚ್ಚ ಆಡಳಿತಗಾರ. ಅವರು ನಮ್ಮನ್ನಗಲಿ 7 ವರ್ಷಗಳು ಸಂದಿದೆ. ಗೋಪಾಲ ಭಂಡಾರಿಯವರು ನಮ್ಮೊಂದಿಗಿಲ್ಲ ಎನ್ನುವುದನ್ನು ಈಗಲೂ ಯೋಚಿಸಲು ಸಾಧ್ಯವಾಗುತ್ತಿಲ್ಲ. ಅವರ ಸಾವು ಸಾವಲ್ಲ, ಅಲ್ಲಿ ಅಳಿದದ್ದಕ್ಕಿಂತ ಉಳಿದದ್ದೇ ಹೆಚ್ಚು !.
ರಾಜ್ಯದ ಕಂಡ ಸ್ವಚ್ಚ ಆಡಳಿಗಾರ. ಕಡುಬಡವರೂ ಕೂಡ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಬಹುದೊಡ್ಡ ಕನಸು ಕಂಡು ಕೆಲಸ ಮಾಡಿದ ವ್ಯಕ್ತಿ. ಸರಳತೆ, ಸಜ್ಜನಿಕೆಗೆ ಮಾದರಿ. ಭ್ರಷ್ಟಾಚಾರದ ಸೋಂಕು ಲವಲೇಶವೂ ಅಂಟಿಸಿಕೊಳ್ಳದ ಬಹಳ ಎತ್ತರದ ವ್ಯಕ್ತಿತ್ವ. ಕಾರ್ಕಳ ಕ್ಷೇತ್ರದಲ್ಲಿ ಬಡವರ್ಗದ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು ಎಂದು ಕೆಲಸ ಮಾಡಿದರು. ನಾನು ಕಂಡಂತೆ ಗೋಪಾಲ ಭಂಡಾರಿ ಒಬ್ಬ ಅಪರೂಪದ ವ್ಯಕ್ತಿ. ಅಸೂಯೇ ಮನೋಭಾವವೇ ಅವರಲ್ಲಿ ಇರಲಿಲ್ಲ. ಎಲ್ಲರನ್ನೂ ಬಹಳ ಪ್ರೀತಿ ವಾತ್ಸಲ್ಯದಿಂದಲೇ ಕಾಣುತ್ತಿದ್ದರು. ಯಾವೂದೇ ರೀತಿಯ ಸಣ್ಣತನ ಅಥವಾ ಅಧಿಕಾರದ ಶ್ರೀಮಂತಿಕೆಯ ದರ್ಪವನ್ನು ಪ್ರದರ್ಶಿಸಿದ ವ್ಯಕ್ತಿಯಲ್ಲ. ಹೀಗಾಗಿ ಗೋಪಾಲ ಭಂಡಾರಿ ಅವರು ಒಬ್ಬ ವ್ಯಕ್ತಿಯಾಗಿ, ರಾಜಕೀಯ ನಾಯಕರಾಗಿ ಅಥವಾ ಶಾಸಕರಾಗಿ ಅಧಿಕಾರದಲ್ಲಿ ಇದ್ದರೂ ಎಲ್ಲಿಯೂ ಯಾವೂದೇ ರೀತಿಯ ಕಳಂಕಗಳನ್ನು ಅಂಟಿಸಿಕೊಂಡವರಲ್ಲ.
ಒರ್ವ ಪತ್ರಕರ್ತನಾಗಿ ಒಬ್ಬ ವ್ಯಕ್ತಿಯ ಬಗೆಗೆ ರಾಜಕೀಯ ಪಕ್ಷಕ್ಕೆ ಸೇರಿದ್ದ ವ್ಯಕ್ತಿಯ ಬಗೆಗೆ ಬರೆಯುವುದು ಸರಿಯೋ ತಪ್ಪೋ ಗೊತ್ತಿಲ್ಲ. ಸ್ಮರಿಸುವುದು ಧರ್ಮ. ನನಗೂ ಅವರಿಗೂ ಸುದೀರ್ಘ ಕಾಲದ ಒಡನಾಟವಿತ್ತು. ವಯಸ್ಸಿನಲ್ಲಿ ನಾನು ಅವರಿಗಿಂತ ಸುಮಾರು ವರ್ಷ ಚಿಕ್ಕವನು. ಆದರೆ ಅವರು ಚಿಕ್ಕವರು – ದೊಡ್ಡವರು ಎನ್ನದೆ ಎಲ್ಲರನ್ನೂ ಬಹಳ ಪ್ರೀತಿ ಗೌರವದಿಂದಲೇ ನಡೆದುಕೊಳ್ಳುತ್ತಿದ್ದರು. ತಪ್ಪುಗಳನ್ನು ಮಾಡಿದ್ದಾಗ ಬಹಳಷ್ಟು ಸಲ ಬುದ್ಧಿ ಮಾತು ಹೇಳುತ್ತಿದ್ದರು. ನಾನು ನೋಡಿರುವಂತೆ ಅದರಲ್ಲಿಯೂ ರಾಜಕಾರಣದಲ್ಲಿ ಅತ್ಯಂತ ಪ್ರಾಮಾಣಿಕ ವ್ಯಕ್ತಿಯಾಗಿದ್ದರು. ಒಬ್ಬ ವ್ಯಕ್ತಿಯಾಗಿ ಅವರು ಬದುಕನ್ನು ತುಂಬಾ ಪ್ರೀತಿಸುತ್ತಿದ್ದರು. ವೈಯಕ್ತಿಕವಾಗಿ ಕಾಳಜಿವಹಿಸುತ್ತಿದ್ದರು. ಎಲ್ಲರ ಸಂಕಷ್ಟಗಳಿಗೂ ಸ್ಪಂದಿಸಬೇಕೆಂಬ ಕಾಳಜಿ ಅವರಲ್ಲಿ ಸದಾ ಇರುತ್ತಿತ್ತು. ಸಾರ್ವಜನಿಕ ಬದುಕಿನಲ್ಲಿ ಇದ್ದರೂ ವೈಯಕ್ತಿವಾಗಿ ತಮ್ಮ ಕುಟುಂಬದ ಜವಾಬ್ಧಾರಿಗಳನ್ನು ಕೂಡ ಅಷ್ಟೇ ಶಿಸ್ತು ಕ್ರಮಬದ್ಧವಾಗಿ ನಿಭಾಯಿಸುತ್ತಿದ್ದರು. ಸಾಮಾಜಿಕವಾಗಿ ಯಾವೂದೇ ಜಾತಿ ಧರ್ಮಕ್ಕೆ ಸೀಮಿತರಾಗಿರಲಿಲ್ಲ. ವ್ಯಕ್ತಿ ಒಂದು ಜಾತಿ ಧರ್ಮದಲ್ಲಿ ಹುಟ್ಟಿರಬಹುದು. ಆದರೆ ಜಾತಿ ಧರ್ಮಗಳನ್ನು ಮೀರಿನಿಂತು ಒಬ್ಬ ಅಪ್ಪಟ ಜಾತ್ಯತೀತವಾದಿಯಾಗಿ ಬದುಕಿದವರು. ನಾವು ಇಂತಹ ಜಾತಿಯಲ್ಲೇ ಹುಟ್ಟಬೇಕು, ಶ್ರೀಮಂತರಾಗಿಯೇ ಹುಟ್ಟುಬೇಕು ಎಂದು ಯಾರೂ ಅರ್ಜಿ ಹಾಕಿ ಹುಟ್ಟಲು ಸಾಧ್ಯವಿಲ್ಲ. ಸಾಧ್ಯವಿದ್ದರೆ ಎಲ್ಲರೂ ಸ್ಥಿತಿವಂತರ ಮನೆಯಲ್ಲೇ ಹುಟ್ಟಬೇಕು ಎಂದು ಅರ್ಜಿ ಹಾಕುತ್ತಿದ್ದರು ಎಂದು ಗೋಪಾಲ ಭಂಡಾರಿಯವರು ಸದಾ ಹೇಳುತ್ತಿದ್ದರು.
ಬಡವನಾಗಿ ಹುಟ್ಟುವುದು ತಪ್ಪಲ್ಲ, ಬಡವನಾಗಿ ಸಾಯುವುದು ತಪ್ಪು ಎಂದು ಯಾವಾಗಲೂ ಹೇಳುತ್ತ ಯುವಕರಿಗೆ ಪ್ರೇರಣೆಯ ಶಕ್ತಿಯಾಗಿದ್ದರು.
ರಾಜಕಾರಣದ ಹೊರತಾಗಿಯೂ ಕೃಷಿಯಲ್ಲಿ ಬಹಳಷ್ಟು ಆಸಕ್ತಿ ತೋರುತ್ತಿದರು. ಅವರ ತಂದೆ ತಾಯಿ ಕೃಷಿ ಮಾಡುತ್ತಿದ್ದರು. ಗೋಪಾಲ ಭಂಡಾರಿ ತಾನೂ ಕೂಡ ಗದ್ದೆ ಉಳುಮೆ ಮಾಡುತ್ತಿದ್ದರು. ಭತ್ತದ ಗದ್ದೆಯಲ್ಲಿ ನೇಜಿ ಹೊತ್ತು ನಾಟಿ ಮಾಡಿದವರು. ಅವರಿಗೆ ಭತ್ತ ಬೇಸಾಯ ಮಾಡದಿದ್ದರೆ ಮನಸ್ಸಿಗೆ ಸಮಾಧಾನ ಇರುತ್ತಿರಲಿಲ್ಲ. ಸಾರ್ವಜನಿಕ ವೇದಿಕೆಗಳಲ್ಲಿ ಭಾಷಣಗಳನ್ನು ಮಾಡಬೇಕಾದರೂ ಬಹಳಷ್ಟು ತಯಾರಿ ಅಧ್ಯಯನ ಮಾಡಿಕೊಂಡು ಬರುತ್ತಿದ್ದರು. ಅಪಾರ ಜ್ಞಾನವಿತ್ತು, ತಿಳಿದುಕೊಳ್ಳವ ತವಕವಿತ್ತು. ಸಾಹಿತ್ಯ ಆಸಕ್ತಿ ಇತ್ತು. ನಾಡಿನ ಶ್ರೇಷ್ಠ ಸಾಹಿತಿಗಳ ಒಡನಾಟವಿತ್ತು. ಓದುವ ಅಭಿರುಚಿ ಇತ್ತು. ಪುಸ್ತಕ ಪ್ರೇಮಿಯಾಗಿದ್ದರು ಹಾಗಾಗಿಯೇ ಭಂಡಾರಿಯವರು ಜ್ಞಾನದ ಭಂಡಾರ ಆಗಿದ್ದರು.
ಕ್ಲಿಷ್ಟಕರವಾದ ಸವಾಲನ್ನೂ ಕೂಡ ಅತೀ ಸುಲಭವಾಗಿ ಪರಿಹರಿಸುತ್ತಿದ್ದರು. ಪ್ರತಿಪಕ್ಷದವರು ಕೂಡ ಗೋಪಾಲ ಭಂಡಾರಿಯವರನ್ನು ಶ್ಲಾಘಿಸುತ್ತಿದ್ದರು. ರಾಜಕಾರಣದಲ್ಲಿ ಒಂದು ಪಕ್ಷಕ್ಕೆ ಸೀಮಿತವಾದರೂ ಬಿಜೆಪಿ ಸೇರಿ ಎಲ್ಲಾ ಪಕ್ಷದಲ್ಲೂ ಸ್ನೇಹಿತರನ್ನು ಸಂಪಾದಿಸಿದ್ದರು. ಜನ ಸಂಪತ್ತೇ ಅವರ ನಿಜವಾದ ಸಂಪತ್ತು ಆಗಿತ್ತು. ಅನುಭವ, ನಿಷ್ಠೆ, ದಕ್ಷತೆಯಿಂದಾಗಿ ಅವರು ವಿಧಾನ ಸೌಧದಲ್ಲಿ ಆಡುತ್ತಿದ್ದ ಮಾತುಗಳಿಗೆ ಎಲ್ಲರೂ ಕಿವಿಯಾಗುತ್ತಿದ್ದರು. ಎಲ್ಲಾ ರಾಜಕೀಯ ಪಕ್ಷಗಳು ಗೋಪಾಲ ಭಂಡಾರಿಯವರನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸಿದರು. ಆದರೆ ಅವರು ಮಾತ್ರ ಕೊನೆಯ ಉಸಿರಿನ ತನಕವೂ ಪಕ್ಷ ನಿಷ್ಠರಾಗಿ ಉಳಿದರು. ತನ್ನ ಕೊನೆಯ ದಿನದ ವರೆಗೂ ಜನರ ಸೇವೆಗಾಗಿ ತನ್ನ ಬದುಕು ಸಮರ್ಪಿಸಿದರು. ಅವರ ಪಾರ್ಥಿವ ಶರೀರದ ಜೊತೆಗೆ ಬಂದ ಅವರ ಸಣ್ಣ ಸೂಟ್ ಕೇಸ್ನಲ್ಲಿ ಜನರ ಕೆಲವು ಅರ್ಜಿಗಳಿದ್ದವು ಎನ್ನುವಾಗ ಕಣ್ಣೀರಾಗುತ್ತದೆ. ಜನಪ್ರತಿನಿಧಿಯಾಗಿ ತನಗೆ ಅಧಿಕಾರ ಇಲ್ಲದಿದ್ದರೂ ಜನಸೇವೆಗಾಗಿ ತಾನು ಸದಾ ಸಿದ್ಧರಿದ್ದರು ಎಂಬುದು ಅವರ ಕಾರ್ಯಗಳು ತಿಳಿಸುತ್ತದೆ. ಸೌಮ್ಯ ಸ್ವಭಾವದವರಾಗಿದ್ದರೂ ಅವರ ಜತೆಗೆ ಮಾತನಾಡಬೇಕಾದರೇ ನಮಗೆಲ್ಲ ಭಯವಾಗುತ್ತಿತ್ತು. ಆದರೂ ಅವರು ಅಷ್ಟೇ ದೊಡ್ಡ ಸ್ನೇಹಮಯಿ ಕೂಡ ಆಗಿದ್ದರು. ಅಧಿಕಾರಕ್ಕಾಗಿ ಈಗೀನ ರಾಜಕಾರಣವೇ ಒಂದು ತರವಿದ್ದರೇ ಗೋಪಾಲ ಭಂಡಾರಿ ತಾನು ಅವಕಾಶವನ್ನು ಕೇಳಿಕೊಂಡು ಹೋಗುತ್ತಿರಲಿಲ್ಲ. ಎಂಎಲ್ಸಿ ಸಹಿತ ಅವರಿಗೆ ರಾಜಕೀಯದ ಹೊಸ ಜವಾಬ್ಧಾರಿಯನ್ನು ತನಗೆ ಕೇಳುವ ಅವಕಾಶವಿದ್ದರೂ ಅವರು ಕೇಳಲಿಲ್ಲ. ನಾಯಕರು ಕೊಡಲಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಸೋತಾಗ ಅವರಿಗೆ ಇತರ ಹುದ್ದೆಯನ್ನು ಸರ್ಕಾರದಲ್ಲಿ ಕೊಡಲು ವಿಪುಲ ಅವಕಾಶಗಳಿತ್ತು. ಆದರೆ ಮಹಾ ನಾಯಕರು ಮಾಡಲಿಲ್ಲ. ಗೋಪಾಲ ಭಂಡಾರಿಯವರಿಗೂ ಅಧಿಕಾರದ ವ್ಯಾಮೋಹವಿರಲಿಲ್ಲ. ರಾಜಕಾರಣ ನನಗೆ ವೃತ್ತಿ ಅಲ್ಲ ಅದು ಸೇವೆಗೆ ದೊರೆತ ಅವಕಾಶ ಎನ್ನುತ್ತಿದ್ದರು. ವೃತ್ತಿ ರಾಜಕಾರಣದ ಜೊತೆಗೆ ಇದ್ದರೂ ತಮ್ಮತನವನ್ನು ಕಾಯ್ದುಕೊಂಡು ಬಂದರು. ಕೃಷಿ ಕೆಲಸ ಮಾಡಿದರು. ಜಾತಿಯ ಕಸುಬು ಮಾಡಿದರು. ಅಂದೇ ಜನಸೇವೆಯ, ನಾಯಕತ್ವದ ಗುಣ ಅವರಲ್ಲಿ ಚಿಗುರೊಡೆದಿತ್ತು. ಮುಂದೆ ಜನಸೇವೆಗಾಗಿ ರಾಜಕಾರಣ ಪ್ರವೇಶ ಮಾಡಿದರು. ನಾಯಕರ ಬೆನ್ನ ಹಿಂದೇ ನಿಂತು ಅವಿರತವಾಗಿ ದುಡಿದರು. ಪಕ್ಷದಲ್ಲಿ ಎಳವೇಯಲ್ಲೇ ಎಲ್ಲಾ ಜವಾಬ್ಧಾರಿಯನ್ನು, ತಾಲ್ಲೂಕು ಪಂಚಾಯತ್ ಸದಸ್ಯರಾದರು, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದರು. ಜಿಲ್ಲಾ ಪರಿಷತ್ ಸದಸ್ಯರಾದರು, ಅಫೆಕ್ಸ್ ಬ್ಯಾಂಕ್ ನಿರ್ದೇಶಕರರಾದರು. ನಮ್ಮ ಕ್ಷೇತ್ರದ ಶಾಸಕರಾದರು. ಎಲ್ಲರ ಬಗ್ಗೆ ಅಗಾಧ ಪ್ರೀತಿ ತೋರುತ್ತಿದ್ದರು. ಅವರ ಎದೆಯಲ್ಲಿ ಹೋರಾಟದ ಕಿಚ್ಚು ಆರಿರಲಿಲ್ಲ. ಹೋರಾಟ ಮಾಡಿ ತನ್ನೂರು ಹೆಬ್ರಿಯನ್ನು ತಾಲ್ಲೂಕು ಮಾಡಿಸಿಯೇ ಬಿಟ್ಟರು. ತಾಲ್ಲೂಕಿನ ವೈಭವ ನೋಡಲು ಮಾತ್ರ ಅವರಿಲ್ಲ. ಹೆಬ್ರಿ ಕಾರ್ಕಳಕ್ಕೆ ಹಲವು ಶಾಶ್ವತ ಕೊಡುಗೆಯನ್ನು ನೀಡಿ ಈಗ ನೆನಪಾಗಿದ್ದಾರೆ. ಕಣ್ಣುಗಳಲ್ಲಿ ಕನಸುಗಳು ಕಂದಿರಲಿಲ್ಲ. ನೆಮ್ಮದಿಯ ಬದುಕಿನಲ್ಲಿ ಬದುಕುವ ಕಾಲ ಬರುವುದು ಯಾವಾಗ ? ಜಾತಿ ಮತ ಪಂಥಗಳಲ್ಲಿ ಒಡೆದು ಛಿದ್ರವಾಗಿರುವ ಈ ಭಾರತೀಯ ಸಮಾಜ ಒಂದಾಗಿ ಒಗ್ಗಟ್ಟಾಗುವುದು ನೋಡಬೇಕು ಎನ್ನುತ್ತಲೇ ನಮ್ಮನ್ನೆಲ್ಲ ಬಿಟ್ಟು ಹೋದರು. ಹುತ್ತುರ್ಕೆಯ ಮಣ್ಣಿನಲ್ಲಿ ಬೆಳೆದು ದೊಡ್ಡವರಾಗಿ ಹೃದಯಘಾತವಾಗಿ ಅದೇ ಹುತ್ತುರ್ಕೆಯ ಮಣ್ಣಿನಲ್ಲಿ ಭೂಮಿಗೊರಗಿಬಿಟ್ಟರು ಗೋಪಾಲ ಭಂಡಾರಿಯವರು. ಭೂಮಿಪುತ್ರ ಭೂಮಿಗೆ ಸಂದು ಹೋದ. ನಮ್ಮ ಹೆಬ್ರಿಯ ಉರಿಯುವ ಪಂಜೊಂದು ಆರಿ ಹೋಗಿದೆ. ತಬ್ಬಲಿಗಳಾದೆವು ಎನ್ನುವ ಅದೊಂದು ಸಂಕಟ ನನ್ನ ಹೊಟ್ಟೆಯೊಳಗೆ ಈಗಲೂ ಕರುಳು ಹಿಸುಕುತ್ತಿದೆ. ಶ್ರೀಮಂತಿಕೆ ಶಿಕ್ಷಣ ಗೋಪಾಲ ಭಂಡಾರಿ ಅವರನ್ನು ಎತ್ತರಕ್ಕೆ ಏರಿಸಿಲ್ಲ. ಅವರ ಸೌಮ್ಯ ಸ್ವಭಾವ, ಜನಸೇವೆಯ ಗುಣ, ನಿಷ್ಠೆ ಜ್ಞಾನ ಅವರನ್ನು ಬೆಳೆಸಿದೆ. ಕನ್ನಡದ ಬಗೆಗೆ ಅಪಾರ ಪ್ರೀತಿಯಿಂದ ನಿರರ್ಗಳವಾಗಿ ಮಾತಾನಾಡುತ್ತಿದ್ದು. ಭಾಷೆಯ ಬಗೆಗೆ ಅಪಾರವಾದ ಹಿಡಿತ ಮತ್ತು ಜ್ಞಾನವಿತ್ತು. ತುಳು,ಕನ್ನಡ ಹಿಂದಿ, ಇಂಗ್ಲೀಷ್, ಕುಂದಾಪ್ರ ಕನ್ನಡ, ಕೊಂಕಣಿ ಸಹಿತ ಹಲವು ಭಾಷೆಯನ್ನು ಮಾತನಾಡುತ್ತಿದ್ದರು. ವಿಧಾನಸಭೆಯಲ್ಲಿ ಗೋಪಾಲ ಭಂಡಾರಿ ಮಾತಾನಾಡಲು ಎದ್ದು ನಿಂತರೆ ಎಲ್ಲರೂ ಅವರ ಮಾತುಗಳನ್ನು ಕೇಳುತ್ತಿದ್ದರು. ವಿಧಾನಸಭೆಯ ಗಟ್ಟಿದನಿಯಾದರು. ಪ್ರಥಮ ಭಾರಿ ಶಾಸಕರಾಗಿ ಮಾತನಾಡಲು ಎದ್ದು ನಿಂತು ಮಾತು ಆರಂಭಿಸಿದಾಗ ಮುಖ್ಯಮಂತ್ರಿ ಎಸ್ ಎಂ.ಕೃಷ್ಣ ಅವರು ಗೋಪಾಲ ಭಂಡಾರಿ ಮಾತಿಗೆ ಮರುಳಾಗಿ ಶಹಬ್ಬಾಸ್ ಎಂದಿದ್ದರು. ನಿನಗೆ ಭವಿಷ್ಯವಿದೆ ಎಂದಿದ್ದರು. ಅಂದು ಕಾರ್ಕಳದ ಸಾರ್ವಜನಿಕ ಸಭೆಗೆ ಬಂದಿದ್ದ ಎಸ್.ಎಂ.ಕೃಷ್ಣ ಗೋಪಾಲ ಭಂಡಾರಿ ಅವರನ್ನು ನನ್ನ ಮಡಿಲಿಗೆ ಹಾಕಿ ನಾನು ನೋಡ್ತೇನೆ ಎಂದು ಕಾರ್ಕಳದ ಮಹಾಜನತೆಗೆ ಮನವಿ ಮಾಡಿದ್ದರು. ಆದರೆ ಎರಡನೇ ಅವಧಿಯ ಚುನಾವಣೆಯಲ್ಲಿ ಸೋತರು. ಮೂರನೇ ಅವಧಿಯಲ್ಲಿ ಮತ್ತೇ ಶಾಸಕರಾದರು.
ಒಮ್ಮೆ ನಾವು ಒಟ್ಟಿಗೆ ಇರುವಾಗ ಸಚಿವರಾಗಿದ್ದ ಟಿ.ಬಿ.ಜಯಚಂದ್ರ ಅವರ ಪೋನ್ ಭಂಡಾರ್ರಿಗೆ ಬಂದಿತ್ತು. ನೀವು 60 ಸಾವಿರ ಓಟು ತಗೊಂಡು ಸೊತ್ತಿದ್ದೀರಿ. ನನಗೆ ಬಿದ್ದಿದ್ದೇ 30 ಸಾವಿರ ಮತಗಳು ಆದರೆ ನಾನು ವಿನ್ ಆಗಿದ್ದೇನೆ. ಬೇಸರ ಮಾಡಬೇಡಿ ಎಂದು ಜಯಚಂದ್ರ ಧೈರ್ಯದ ಮಾತುಗಳು ಹೇಳುತ್ತಿದ್ದುದು ಅವರ ಗಟ್ಟಿ ಸ್ವರದ ಮಾತಿನಲ್ಲಿ ನನಗೆ ಹೊರಗೆ ಕೇಳುತ್ತಿತ್ತು. ಒಮ್ಮೆ ಚಿಕ್ಕಮಗಳೂರು ಮಾರ್ಗವಾಗಿ ಬೆಂಗಳೂರಿಗೆ ಹೋಗುವಾಗ, ಬಸ್ ಅಪಘಾತವಾಗಿ ಭಂಡಾರಿಯವರ ಹಣೆಗೆ ದೊಡ್ಡ ಏಟು ಆಗಿತ್ತು. ಅದನ್ನು ಅಷ್ಟೇನೂ ಗಮನಕ್ಕೂ ತಗೊಳ್ಳದ ಭಂಡಾರ್ರು ಹಣೆಯ ಗಾಯಕ್ಕೆ ಬ್ಯಾಂಡೇಜ್ ಹಾಕಿಕೊಂಡು ಉಡುಪಿಯಲ್ಲಿ ನಡೆಯುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸಭೆಗೆ ಹೋದರು. ಹಣೆಯಲ್ಲಿ ದೊಡ್ಡ ಬ್ಯಾಂಡೇಜ್ ಗಮನಿಸಿದ ಸಿದ್ಧರಾಮಯ್ಯ ” ಏ ಭಂಡಾರಿ, ಇಲ್ಲಿ ಬಾ, ಅದೇನಪ್ಪ, ಹಣೆಯಲ್ಲಿ ಅಷ್ಟುದೊಡ್ಡ ಬ್ಯಾಂಡೇಜ್ ಹಾಕ್ಕೋಂಡಿದ್ದಿ, ಇಲ್ಲಿಗ್ಯಾಕೆ ಬಂದೆ, ಮನೆಗೆ ಹೋಗು ರೆಸ್ಟ್ ಮಾಡು ಎಂದು ಸಿದ್ಧರಾಮಯ್ಯ ಗದರಿಸಿದ್ದರು. ಮುಖ್ಯಮಂತ್ರಿ ನಮ್ಮ ಜಿಲ್ಲೆಗೆ ಬರುವಾಗ ತಾನು ಹೋಗುವುದು ಕರ್ತವ್ಯ ಎಂದು ಹೋಗಿದ್ದರು. ಇದು ನಿಷ್ಠೆಗೆ ಸಾಕ್ಷಿ. ರಾಜಕೀಯ ಎದುರಾಳಿಯನ್ನು ಕೂಡ ಚುನಾವಣೆಯ ಹೊರತು ಧ್ವೇಷ ಮಾಡುತ್ತಿರಲಿಲ್ಲ. ರಾಜಕೀಯದಲ್ಲಿ ವೈಯಕ್ತಿಕವಾದ ಧ್ವೇಷ ಎಂದರೆ ಮಾರು ದೂರ ಹೋಗುತ್ತಿದ್ದರು. ಯಾರ ವೈಯಕ್ತಿಕವಾದ ವಿಷಯವನ್ನು ಎಂದೂ ಕೂಡ ಅವರು ಮಾತಾನಾಡಿದವರಲ್ಲ. ಅದು ಅವರ ದೊಡ್ಡ ಗುಣ. ಡಾ.ವಿ.ಎಸ್ ಆಚಾರ್ಯ ಅವರ ಬಗೆಗೆ ಗೋಪಾಲ ಭಂಡಾರಿ ಅಪಾರ ಗೌರವ ಹೊಂದಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಡಾ.ವಿ.ಎಸ್ ಆಚಾರ್ಯ ರಾಜ್ಯದ ಗೃಹಸಚಿವರಾಗಿದ್ದರು. ಗೋಪಾಲ ಭಂಡಾರಿ ಶಾಸಕರಾಗಿದ್ದರು. ಡಾ.ವಿ.ಎಸ್ ಆಚಾರ್ಯರು ಕಾರ್ಕಳಕ್ಕೆ ಬರುವಾಗ ಗೋಪಾಲ ಭಂಡಾರಿಯವರಿಗೆ ಕರೆ ಮಾಡಿ ಎಲ್ಲಿದ್ದೀರಿ ಎಂದು ಖಚಿತ ಪಡಿಸಿಕೊಂಡು ಬರುತ್ತಿದ್ದರು. ಗೋಪಾಲ ಭಂಡಾರಿ ವಿ.ಎಸ್. ಆಚಾರ್ಯ ಅವರನ್ನು ಕ್ಷೇತ್ರದ ಗಡಿಯಲ್ಲೇ ಎದುರುಗೊಂಡು ಒಂದೇ ಕಾರಿನಲ್ಲಿ ಬಂದದ್ದುಂಟು. ಹೆಚ್ಚಾಗಿ ಗೋಪಾಲ ಭಂಡಾರಿಯವರು ತನ್ನ ಭಾಷಣದಲ್ಲಿ ವಿ.ಎಸ್. ಆಚಾರ್ಯರನ್ನು ಪ್ರಸ್ತಾಪಿಸುತ್ತಿದ್ದರು. ಡಾ.ವಿ.ಎಸ್ ಆಚಾರ್ಯರಿಗೂ ಗೋಪಾಲ ಭಂಡಾರಿಯವರ ಮೇಲೆ ಪ್ರೀತಿ ಇತ್ತು.
ತನಗೆ ಜೀವನದಲ್ಲಿ ಬಂದ ಎಲ್ಲಾ ಕಷ್ಟನಷ್ಟಗಳನ್ನು, ದು:ಖವನ್ನು ತಾನೊಬ್ಬನೇ ಸಹಿಸಿಕೊಳ್ಳುತ್ತಿದ್ದರು. ಒಂದು ದಿನ ಕೂಡ ನನಗೆ ಸಮಸ್ಯೆ ಇದೆ, ನೋವು ಬೇಸರ ಇದೆ ಎಂದು ಯಾರಲ್ಲೂ ಹೇಳಿಕೊಂಡವರಲ್ಲ. ಕೊನೆಯ ದಿನದಲ್ಲಿ ಅವರನ್ನು ಕಾಡಿದ್ದು ಒಟ್ಟಿಗಿದ್ದವರು ಮಾಡಿದ ಕೆಲವು ಘಟನೆಗಳು. ಅದು ಮನಸ್ಸಿನೊಳಗೆ ಕೊಡುತ್ತಿದ್ದ ನೋವು, ಅದರಿಂದ ಅವರು ಹಲವು ಸಲ ಕಣ್ಣೀರು ಹಾಕಿದುಂಟು. ಕೊನೆಯ ಒಂದೂವರೇ ವರ್ಷ ಅವರ ಗಟ್ಟಿ ಮನಸ್ಸು ಕುಗ್ಗಿ ಹೋಗಿತ್ತು.
ಎಲ್ಲಕ್ಕಿಂತ ಮಿಗಿಲಾಗಿ ಅವರೊಬ್ಬ ಒಳ್ಳೇಯ ಭಾಷಣಕಾರ. ಗಂಭೀರ ಭಾಷಣದಲ್ಲೂ ಹಾಸ್ಯದ ಲೇಪ ಹಚ್ಚಿಯೇ ಹೇಳುವುದು ಅವರಿಗೆ ಕರಗತವಾಗಿತ್ತು. ಅವರ ರಾಜಕೀಯ ಎದುರಾಳಿಯನ್ನು ಕೂಡ ಒಂದೇ ವೇದಿಕೆಯಲ್ಲಿದ್ದರೇ ಒಬ್ಬರಿಗೊಬ್ಬರು ಮಾತಾನಾಡುತ್ತಿದ್ದರು. ಇಂತಹ ಒಬ್ಬ ಮೌಲ್ಯಾಧಾರಿತ ರಾಜಕಾರಣಿಯನ್ನು ನಾಡು ಕಳೆದುಕೊಂಡಿದೆ. ಆ ನೋವು ಮಾಸಲು ಸಾಧ್ಯವೂ ಇಲ್ಲ. ಆ ಮೂಲಕ ಕರಾವಳಿಯ ಸಜ್ಜನ ರಾಜಕಾರಣದ ಕೊಂಡಿಯೊಂದು ಕಳಚಿ ಹೋಗಿದೆ. ಅವರ ಸರಳತೆ, ಒಳ್ಳೇಯತನ, ಸ್ವಚ್ಚ ಮನಸ್ಸು ಇಂದಿನ ರಾಜಕಾರಣಕ್ಕೆ ಆದರ್ಶ. ಅವರು ದೈಹಿಕವಾಗಿ ನಮ್ಮೊಂದಿಗಿಲ್ಲದಿರಬಹುದು. ಪ್ರತಿದಿನವೂ ಅವರ ನೆನಪುಗಳು ಒಂದಿಲ್ಲೊಂದು ವಿಚಾರಕ್ಕೆ ಬರುತ್ತಲೇ ಇರುತ್ತದೆ. ಅವರ ಒಡನಾಟ ಚಿಂತನೆ ನಮ್ಮೊಳಗೆ ಸದಾ ಜೀವಂತ. ಗೋಪಾಲ ಭಂಡಾರಿ ಅವರು ಈಗ ನಮಗೆ ನೆನಪು ಮಾತ್ರ. ಆವತ್ತು ಹುತ್ತುರ್ಕೆಯ ಮಣ್ಣಿಯಲ್ಲಿ ಅಂತಿಮವಾಗಿ ನಮ್ಮ ಭಂಡಾರ್ರನ್ನು ಕೊನೆಯ ಭಾರಿಗೆ ನೋಡಲು ಜನಮುತ್ತಿಕೊಂಡಿದ್ದರು. ಕೆಲವರು ಬಿಕ್ಕಿಬಿಕ್ಕಿ ಅಳುತ್ತಿದ್ದರು. ಗೋಪಾಲ ಭಂಡಾರಿಯವರದ್ದು ಸಾರ್ಥಕ ಬದುಕು. ಅವರ ದೇಹ ಅಳಿದರೂ ಅವರು ಹಚ್ಚಿದ ಸೇವೆಯ ದೀಪ ಉರಿಯುತ್ತಲೇ ಇದೆ. ಅವರ ಸಾವು ಸಾವಲ್ಲ, ಅಲ್ಲಿ ಅಳಿದದ್ದಕ್ಕಿಂತ ಉಳಿದದ್ದೇ ಹೆಚ್ಚು !.
– ಸುಕುಮಾರ್ ಮುನಿಯಾಲ್ – ಪತ್ರಕರ್ತರು.


