ಮುದ್ರಾಡಿ : ನಮ್ಮ ಮನಸ್ಸಿನಲ್ಲಿರುವ ಋಣಾತ್ಮಕ ಭಾವನೆಗಳು ಅಳಿದು ಧನಾತ್ಮಕ ಭಾವನೆಗಳು ಬೆಳೆಯಲು ಯೋಗಾಸನವು ಬಹಳ ಪ್ರಯೋಜನಕಾರಿಯಾಗಿದೆ. ಯೋಗಾಸನವನ್ನು ಮಾಡುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿ ರಕ್ತ ಸಂಚಾರ ಸರಿಯಾಗಿ ಆಗುತ್ತದೆ. ಕಾಯಿಲೆಗಳಿಂದ ದೂರವಿದ್ದು ಮನಸ್ಸು ಪ್ರಶಾಂತವಾಗಿರಲು ಯೋಗಾಸನವನ್ನು ದಿನನಿತ್ಯದ ಚಟುವಟಿಕೆಗಳಲ್ಲಿ ರೂಢಿಸಿಕೊಳ್ಳೋಣ ಎಂದು ಮುದ್ರಾಡಿ ಎಂಎನ್ ಡಿಎಸ್ ಎಂ. ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಹೇಳಿದರು.
ಅವರು ಮುದ್ರಾಡಿ ಎಂಎನ್ ಡಿಎಸ್ ಎಂ. ಪ್ರೌಢಶಾಲೆಯಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಘುಪತಿ ಹೆಬ್ಬಾರ್ ಯೋಗಾಸನವನ್ನು ನಡೆಸಿಕೊಟ್ಟರು. ಶಿಕ್ಷಕರಾದ ಮಹೇಶ್ ನಾಯ್ಕ್, ವಿದ್ಯಾರ್ಥಿ ನಾಯಕ ಪ್ರತೀಕ್, ಉಪನಾಯಕ ಸಾನ್ವಿತ್,ಶಿಕ್ಷಕೇತರ ಸಿಬ್ಬಂದಿ ಮಹೇಶ್, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅಂಜಲಿ ಸ್ವಾಗತಿಸಿದರು. ತನಿಯಾ ನಿರೂಪಿಸಿ, ಸಿಂಚನಾ ವಂದಿಸಿದರು.


