ವರಂಗ : ವರಂಗ ಕೆಲ್ ಟೆಕ್ ಎನರ್ಜಿಸ್ ಲಿಮಿಟೆಡ್ ಸಂಸ್ಥೆಯಲ್ಲಿ ಇತ್ತೀಚೆಗೆ ಮಣ್ಣುರಹಿತ ಕೃಷಿ ಜಾಗೃತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.
ಸಾಂಪ್ರದಾಯಿಕ ಮಣ್ಣಿನ ಬೇಸಾಯಕ್ಕೆ ಹೋಲಿಸಿದರೆ ಈ ಪದ್ಧತಿಯಲ್ಲಿ ಅತ್ಯಂತ ಕಡಿಮೆ ಜಾಗದಲ್ಲಿ, ಕನಿಷ್ಠ ನೀರಿನ ಬಳಕೆಯೊಂದಿಗೆ, ಮಣ್ಣಿನಿಂದ ಬರುವ ರೋಗಗಳ ಭಯವಿಲ್ಲದೆ ಗರಿಷ್ಠ ಇಳುವರಿ ಪಡೆಯಬಹುದು ಎಂದು ಕೆಲ್ಟೆಕ್ ಸಂಸ್ಥೆಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಚೇತನ್ ಹೇಳಿದರು.
ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್ ಮಾತನಾಡಿ, “ಪ್ರಸ್ತುತ ದಿನಗಳಲ್ಲಿ ಜಾಗದ ಅಭಾವ, ಮಣ್ಣಿನ ಫಲವತ್ತತೆ ಕುಸಿತ ಮತ್ತು ನೀರಿನ ಅಭಾವ ಹೆಚ್ಚಾಗುತ್ತಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಮಣ್ಣುರಹಿತ ಕೃಷಿ ಪದ್ಧತಿ ರೈತರಿಗೆ ವರದಾನವಾಗಬಲ್ಲದು. ಆಧುನಿಕ ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಗುಣಮಟ್ಟದ ತರಕಾರಿ ಮತ್ತು ಸೊಪ್ಪು ಬೆಳೆಯಲು ಈ ತಂತ್ರಜ್ಞಾನ ರೈತರು ಅಳವಡಿಸಿಕೊಳ್ಳುವುದು ತುರ್ತು ಅಗತ್ಯವಾಗಿದೆ, ಎಂದು ತಿಳಿಸಿದರು.
ನೇರ ಪ್ರಾತ್ಯಕ್ಷಿಕೆ ವೀಕ್ಷಿಸಿದ ರೈತರು : ಎಲ್ಲಾ ರೈತರಿಗೆ ಮಣ್ಣುರಹಿತ ಕೃಷಿ’ ಘಟಕದಲ್ಲಿ ಮಣ್ಣಿಲ್ಲದೆ ಕೇವಲ ಪೋಷಕಾಂಶಯುಕ್ತ ನೀರು ಹಾಗೂ ಪರ್ಯಾಯ ವ್ಯವಸ್ಥೆಗಳನ್ನು ಬಳಸಿ ಗಿಡಗಳನ್ನು ಹೇಗೆ ಬೆಳೆಸುತ್ತಾರೆ ಎಂಬುದನ್ನು ರೈತರು ವೀಕ್ಷಿಸಿ, ತಮ್ಮ ಸಂದೇಹಗಳಿಗೆ ಪರಿಹಾರ ಕಂಡುಕೊಂಡರು.
ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮನು, ಶ್ರೀನಿವಾಸ್, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ನವೀನ್, ನಿಟ್ಟೆ ಎಫ್.ಪಿ.ಒ ಅಧ್ಯಕ್ಷ ಅಶೋಕ್ ಅಡ್ಯಂತಾಯ, ಕೆಲ್ ಟೆಕ್ ಸಂಸ್ಥೆಯ ರವಿಕುಮಾರ್, ತಿರುಮಲ ಕೆ.ಎಸ್, ಶ್ರೀಶ ರಾವ್ ಇದ್ದರು. ಕೆಲ್ ಟೆಕ್ ಯುನಿಟ್ ಇನ್ಚಾರ್ಜ್ ತಿರುಮಲ ಸ್ವಾಗತಿಸಿದರು. ಆಲ್ವಿನ್ ವಂದಿಸಿದರು.



