ಹೆಬ್ರಿ : ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಿ, ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಹೆಬ್ರಿ ಪೊಲೀಸ್ ಠಾಣೆಯು ದೂರದೃಷ್ಟಿಯಿಲ್ಲದ ನಿರ್ಧಾರಗಳಿಂದ ಕಾಡಿನ ಪಾಲಾಗಿದೆ. ಹೆಬ್ರಿ ಪಟ್ಟಣಕ್ಕೆ ದೂರದಲ್ಲಿರುವ ಕಾರ್ಕಳ ರಸ್ತೆಯ ಕಾಡಿನ ಅಂಚಿನಲ್ಲಿ ನಿರ್ಮಾಣ ಮಾಡಲಾಗಿದೆ.
ಹೆಬ್ರಿ ಪೇಟೆಯಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದ ದಟ್ಟ ಕಾಡಿನ ಅಂಚಿನಲ್ಲಿ ಪೊಲೀಸ್ ಠಾಣೆಯನ್ನು ಸ್ಥಾಪಿಸಿರುವುದರಿಂದ ಸಾರ್ವಜನಿಕರು ನ್ಯಾಯಕ್ಕಾಗಿ ಅಲೆಯುವಂತಾಗಿದೆ.
ದಾರಿದೀಪವಿಲ್ಲ – ಸರಿಯಾದ ರಸ್ತೆಯೂ ಇಲ್ಲ :
ನ್ಯಾಯದ ಪರವಾಗಿ ದೂರು ಸಲ್ಲಿಸಲು ಸಾರ್ವಜನಿಕರು ಪೊಲೀಸ್ ಠಾಣೆಗೆ ಹೋಗಬೇಕಾದರೆ ಹೊಂಡ ಗುಂಡಿಗಳ ಹಾದಿಯಲ್ಲಿ ಸಾಗಬೇಕಾದ ಅನಿವಾರ್ಯತೆ ಇದೆ. ಸರಿಯಾದ ಡಾಂಬಾರು ರಸ್ತೆಯು ಇಲ್ಲ. ಕನಿಷ್ಠ ದಾರಿದೀಪದ ವ್ಯವಸ್ಥೆಯೂ ಇಲ್ಲ.
ಹಗಲು ಹೊತ್ತಿನಲ್ಲೇ ಸಂಚರಿಸಲು ಕಷ್ಟವಾಗುವ ಈ ರಸ್ತೆಯಲ್ಲಿ, ಕತ್ತಲಾದರೆ ಹೆಬ್ರಿ ಪೊಲೀಸ್ ಠಾಣೆಯನ್ನು ಹುಡುಕಬೇಕಾಗಿದೆ. ಹೆಬ್ರಿಯಲ್ಲಿ ಬಹುತೇಕ ಸರ್ಕಾರಿ ಕಚೇರಿಗಳು ಪಟ್ಟಣದ ಸಮೀಪದಲ್ಲಿದ್ದರೆ ತುರ್ತು ಸೇವೆ ಬೇಕಾದ ಪೊಲೀಸ್ ಠಾಣೆ ಮಾತ್ರ ಬಹುದೂರ ಇರುವುದು ಎಲ್ಲರಿಗೂ ಸಮಸ್ಯೆಯಾಗಿದೆ. ಮಹಿಳಾ ಸಿಬ್ಬಂದಿ ಸೇರಿ ಪೊಲೀಸರಿಗೆ ಸುರಕ್ಷತೆಗೆ ಆಧ್ಯತೆ ನೀಡಬೇಕಾಗಿದೆ. ಕಾಡಿನ ಅಂಚಿನಲ್ಲಿರುವ ಕಾರಣ ಸೊಳ್ಳೆಗಳ ಕಾಟವೂ ಪೊಲೀಸರಿಗೆ ಹೆಚ್ಚಾಗಿದೆ.
ಪೊಲೀಸ್ ಠಾಣೆಯನ್ನು ಕಾಡಿನಲ್ಲಿ ನಿರ್ಮಾಣ ಮಾಡಿಯಾಗಿದೆ. ಹೆಬ್ರಿ ಪೇಟೆಯಲ್ಲಿರುವ ಹಿಂದಿನ ಪೊಲೀಸ್ ಠಾಣೆಯನ್ನು ಔಟ್ ಪೋಸ್ಟ್ ಮಾಡಬೇಕು. ಮಹಿಳೆಯರು , ಹಿರಿಯ ನಾಗರಿಕರು ತುರ್ತಾಗಿ ದೂರು ನೀಡಬೇಕಾಗಿ ಬಂದರೆ ಈ ಕಾಡಿನ ಹಾದಿಯಲ್ಲಿ ಹೋಗುವುದು ಅಸಾಧ್ಯದ ಮಾತಾಗಿದೆ. ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಉನ್ನತ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು, ಹೆಬ್ರಿ ಪೊಲೀಸ್ ಠಾಣೆಯನ್ನು ಸಾರ್ವಜನಿಕರಿಗೆ ಸುಲಭವಾಗಿ ತಲುಪಬಹುದಾದ ಪೇಟೆಯ ಕೇಂದ್ರ ಭಾಗಕ್ಕೆ (ಅಥವಾ ಐಬಿ ಇರುವ ಆವರಣಕ್ಕೆ) ಸ್ಥಳಾಂತರಿಸಬೇಕು. ಇಲ್ಲವೇ ಸದ್ಯದ ರಸ್ತೆಗೆ ತಕ್ಷಣ ದಾರಿದೀಪ ಹಾಗೂ ಸೂಕ್ತ ರಕ್ಷಣಾ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಪ್ರಗತಿಪರ ಹೋರಾಟಗಾರ ಕುಚ್ಚೂರು ಶ್ರೀಕಾಂತ್ ಪೂಜಾರಿ ಒತ್ತಾಯಿಸಿದ್ದಾರೆ.



