ಹೆಬ್ರಿ : ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಉಡುಪಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ, ಜಿಲ್ಲಾ ಆಸ್ಪತ್ರೆ ಉಡುಪಿ, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮೆದುಳು ದಿನಾಚರಣೆ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುರುವಾರ ನಡೆಯಿತು.
ಕಾರ್ಯಕ್ರಮದಲ್ಲಿ ವಿಶ್ವ ಮೆದುಳು ದಿನದ ಬ್ಯಾನರ್ ಮತ್ತು ಐಇಸಿ ಪ್ರದರ್ಶನ ನಡೆಯಿತು.
ಉಡುಪಿ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿಯಾದ ಕಭೀ ಕಾರ್ಯಕ್ರಮದ ನೋಡಲ್ ಅಧಿಕಾರಿ ಡಾ. ಲತಾ ನಾಯಕ್ ಅವರು ಮಾತನಾಡಿ, ಮೆದುಳು ಆರೋಗ್ಯದಲ್ಲಿ ಜೀವನ ಶೈಲಿ ಹಾಗೂ ಆಹಾರ ಶೈಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು. ಕಭೀ ಕಾರ್ಯಕ್ರಮದಲ್ಲಿ, ನರಮಂಡಲದ ಖಾಯಿಲೆಗಳಾದ ತಲೆನೋವು. ಪಾರ್ಶ್ವವಾಯು, ಅಪಸ್ಮಾರ ಹಾಗೂ ಮರೆವು ಅಂತಹ ಖಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ ಹಾಗೂ ನರಮಂಡಲದ ಖಾಯಿಲೆ ಇರುವಂತಹ ವ್ಯಕ್ತಿಗೆ ಬೆಂಗಳೂರಿನ ನಿಮ್ಹಾನ್ಸ್ ಇಂದ ಟೆಲಿ ನ್ಯೂರೋಲಾಜಿ ಎಂಬ ಸೇವೆಯನ್ನು ನೀಡಲಾಗುತ್ತದೆ. ಹೀಗೆ ಕಭೀ ಉತ್ತಮವಾದ ತಂಡದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಗಳಾದ ಡಾ. ಸಂತೋಷ್ ಕುಮಾರ್ ಬೈಲೂರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಇಂತಹ ಕಾರ್ಯಕ್ರಮ ಬಹಳ ಮುಖ್ಯವಾಗಿದೆ. ಮೆದುಳು ಆರೋಗ್ಯ ಉತ್ತಮವಾಗಿಸಿ ಕೊಳ್ಳಬೇಕಾಗುವುದು ಬಹಳ ಮುಖ್ಯ ಎಂದು ತಿಳಿಸಿದರು.
ಸಮುದಾಯ ಆರೋಗ್ಯ ಕೇಂದ್ರ ಹೆಬ್ರಿಯ ವೈದ್ಯಾಧಿಕಾರಿ ಗಳಾದ ಡಾ. ಉಮಾ ಶೆಟ್ಟಿ, ಡಾ. ಅರ್ಪಿತಾ ಶೆಟ್ಟಿ, ಕಭೀ ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಅರ್ಪಿತಾ ಬ್ರಹ್ಮಾವರ, ಕ್ಲಿನಿಕಲ್ ಸೈಕಾಲಜಿಸ್ಟ್ ರಕ್ಷಿತಾ ಎಮ್., ಫಿಸಿಯೋಥೆರಪಿಸ್ಟ್ ಯಶಸ್ವಿನಿ, ಸಮುದಾಯ ಆರೋಗ್ಯ ಕೇಂದ್ರ ಹೆಬ್ರಿಯ ಸಿಬ್ಬಂದಿವರ್ಗ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು
ಅರ್ಪಿತಾ ಬ್ರಹ್ಮಾವರ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.




