ಮುದ್ರಾಡಿ : ಮಕ್ಕಳು ಜ್ಞಾನ ವೃದ್ದಿಗೆ ಪೂರಕವಾದ ಪುಸ್ತಕಗಳನ್ನು ನಿರಂತರವಾಗಿ ಓದಬೇಕು. ಪುಸ್ತಕದ ಪ್ರೀತಿ ನಮ್ಮ ಭವಿಷ್ಯದ ಬಾಗಿಲನ್ನು ತೆರೆಯುತ್ತದೆ. ಮೊಬೈಲ್ ಬಳಕೆ ಅತಿಯಾದರೆ ಓದುವ ಪೃವೃತ್ತಿ ಕುಂಠಿತಗೊಳ್ಳುತ್ತದೆ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಪಾಠ ಪುಸ್ತಕದ ಓದಿನ ಜೊತೆಗೆ ಗ್ರಂಥಾಲಯದ ಪುಸ್ತಕಗಳನ್ನು ಸದ್ಭಳಕೆ ಮಾಡಿಕೊಳ್ಳಿ ಎಂದು ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಹೇಳಿದರು.
ಅವರು ತಮ್ಮ ಮುದ್ರಾಡಿ ಎಂ. ಎನ್. ಡಿ. ಎಸ್. ಎಂ. ಅನುದಾನಿತ ಪ್ರೌಢಶಾಲೆಯಲ್ಲಿ ಶಾಲೆಯ ಕನ್ನಡ ಸಾಹಿತ್ಯ ಸಂಘದ ಆಶ್ರಯದಲ್ಲಿ ಶಿಕ್ಷಣ ಇಲಾಖೆ ರೂಪಿಸಿದ ಮೊಬೈಲ್ ಬಿಡಿ, ಪುಸ್ತಕ ಹಿಡಿ ಓದು ಸಪ್ತಾಹ -2026 ಅಂಗವಾಗಿ ನಡೆಸಿದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ, ಮಾತನಾಡಿದರು.
ಗ್ರಂಥಾಲಯದ ಪಿತಾಮಹ ಪಿ. ಎನ್. ಪಣಿಕ್ಕರ್ ಸ್ಮರಣಾರ್ಥವಾಗಿ ನಡೆದ ಪುಸ್ತಕ ವಾಚನ ಕಾರ್ಯಕ್ರಮ, ಕಥೆ ಹೇಳುವ ಸ್ಪರ್ಧೆ, ಪಿ. ಎನ್. ಪಣಿಕ್ಕರ್ ಅವರ ಜೀವನಗಾಥೆ, ಕವಿತೆ ವಾಚನ ಕಾರ್ಯಕ್ರಮ, ಗ್ರಂಥಾಲಯ ಭೇಟಿ ಹಾಗೂ ಪುಸ್ತಕ ಪ್ರದರ್ಶನ, ದಿನ ಪತ್ರಿಕೆ ಮತ್ತು ಮಾಸ ಪತ್ರಿಕೆ ಓದುವಿಕೆ, ಪೋಷಕರ ಹಾಗೂ ಸಮುದಾಯದವರೊಂದಿಗೆ ಓದು ಜಾಗೃತಿ ಕಾರ್ಯಕ್ರಮ, ಉತ್ತಮ ಓದುಗರಿಗೆ ಪ್ರಶಸ್ತಿ ವಿತರಣೆ ಪ್ರೋತ್ಸಾಹ ಕಾರ್ಯಕ್ರಮ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ಕನ್ನಡ ಸಾಹಿತ್ಯ ಸಂಘದ ಮಾರ್ಗದರ್ಶಿ ಶಿಕ್ಷಕ ಪಿ. ವಿ. ಆನಂದ ಸಾಲಿಗ್ರಾಮ ಸಂಯೋಜಿಸಿದ್ದರು. ವಿಜೇತರಾದ 10 ನೆ ತರಗತಿಯ ಅಂಜಲಿ, ಸ್ನೇಹಾ, ಆಯುಷ್ಯಾ ಹಾಗೂ ಗಗನ್ ಅವರಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕಿ ಶ್ಯಾಮಲಾ ಕೊಠಾರಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ವಿದ್ಯಾರ್ಥಿನಿ ಸಿಂಚನಾ ಸ್ವಾಗತಿಸಿ, ರೇಷ್ಮಾ ವಂದಿಸಿದರು. ಕುಮಾರಿ ಆಯುಷ್ಯಾ ನಿರೂಪಿಸಿದರು.


