ಉಡುಪಿ ಜಿಲ್ಲೆಯಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ಮಟ್ಕಾ ಜುಗಾರಿ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸಿದ್ದು, ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರಂಭದಲ್ಲಿ ನಾಲ್ವರನ್ನು ಬಂಧಿಸಿದ ಪೊಲೀಸರು, ಅವರಿಂದ ದೊರೆತ ಮಾಹಿತಿಯ ಆಧಾರದ ಮೇಲೆ ಮಟ್ಕಾ ಬುಕ್ಕಿಯೊಬ್ಬನನ್ನೂ ವಶಕ್ಕೆ ಪಡೆದಿದ್ದಾರೆ.
ಆಗಸ್ಟ್ 1ರಂದು ಕಾರ್ಕಳ ನಗರದ ಸಾರ್ವಜನಿಕ ಬಸ್ ನಿಲ್ದಾಣದ ಬಳಿಯ ಮಹಾಮ್ಮಾಯಿ ಮುಖ್ಯಪ್ರಾಣ ಎಂಟರ್ಪ್ರೈಸಸ್ ಅಂಗಡಿಯಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ಆರೋಪದಡಿ ಕಾರ್ಕಳ ನಗರ ಠಾಣೆ ಪೊಲೀಸರು ದಾಳಿ ನಡೆಸಿ ವೀರೇಂದ್ರ ಶೆಟ್ಟಿ (42) ಅವರನ್ನು ಬಂಧಿಸಿದರು. ಆರೋಪಿಯಿಂದ ₹1,415 ನಗದು, ಮಟ್ಕಾ ಚೀಟಿ, ಬಾಲ್ಪೆನ್ ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ (BNS) ಸಂಬಂಧಿತ ಕಲಂಗಳಡಿ ಪ್ರಕರಣ ದಾಖಲಾಗಿದೆ.
ಅದೇ ದಿನ ಬ್ರಹ್ಮಾವರ ಠಾಣಾ ವ್ಯಾಪ್ತಿಯ ಹಂದಾಡಿ ಗ್ರಾಮದ ಗುಡ್ಡಿ ಬಾರ್ ಸಮೀಪ ದಾಳಿ ನಡೆಸಿದ ಪೊಲೀಸರು ಕುಶಾಲ್ ಶೆಟ್ಟಿ (66) ಅವರನ್ನು ಬಂಧಿಸಿ, ₹2,395 ನಗದು, ಮಟ್ಕಾ ಚೀಟಿ ಹಾಗೂ ಬಾಲ್ಪೆನ್ ವಶಪಡಿಸಿಕೊಂಡಿದ್ದಾರೆ.
ಇನ್ನೊಂದು ಕಾರ್ಯಾಚರಣೆಯಲ್ಲಿ ಚಾಂತಾರು ಗ್ರಾಮದ ದಕ್ಷಿಣ್ ಬಾರ್ & ಫ್ಯಾಮಿಲಿ ರೆಸ್ಟೋರೆಂಟ್ ಸಮೀಪ ಮಟ್ಕಾ ಜುಗಾರಿ ನಡೆಸುತ್ತಿದ್ದ ಚಂದ್ರಶೇಖರ ಶೆಟ್ಟಿ (55) ಅವರನ್ನು ಬಂಧಿಸಿ ₹1,400 ನಗದು, ಮಟ್ಕಾ ಚೀಟಿ ಹಾಗೂ ಬಾಲ್ಪೆನ್ ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ ಆತ ಸಂಗ್ರಹಿಸಿದ ಹಣವನ್ನು ಕುಂದಾಪುರದ ರತ್ನಾಕರ ಶೆಟ್ಟಿಗೆ ನೀಡುತ್ತಿದ್ದ ಹಾಗೂ ಕಮಿಷನ್ ಆಧಾರದಲ್ಲಿ ಜುಗಾರಿ ನಡೆಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ಮುಂದಿನ ತನಿಖೆಯಲ್ಲಿ ಆರೋಪಿಗಳಿಂದ ದೊರೆತ ಮಾಹಿತಿಯ ಆಧಾರದ ಮೇಲೆ ಉಡುಪಿ ಶಿವಳ್ಳಿ ನಿವಾಸಿ ಲಿಯೋ ಕರ್ನೆಲಿಯೋ ಎಂಬ ಮಟ್ಕಾ ಬುಕ್ಕಿಯನ್ನು ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಅಕ್ರಮ ಮಟ್ಕಾ ಜುಗಾರಿ ವಿರುದ್ಧ ಮುಂದೆಯೂ ನಿರಂತರ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ತಿಳಿಸಿದೆ.


