ಕುಚ್ಚೂರು : ಹೆಬ್ರಿ ತಾಲ್ಲೂಕಿನ ಕುಚ್ಚೂರು ಗ್ರಾಮದ ಕುಚ್ಚೂರು – 1 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿದ್ದ ಶಿಕ್ಷಕರು ನಿವೃತ್ತಿಯಾಗಿದ್ದು ಇದೀಗ ಶಾಲೆಯಲ್ಲಿ ಸರ್ಕಾರಿ ಶಿಕ್ಷಕರೇ ಇಲ್ಲವಾಗಿದೆ. 4 ಮಂದಿ ಅತಿಥಿ ಶಿಕ್ಷಕರಿಂದಲೇ ಮಕ್ಕಳಿಗೆ ಪಾಠ ಮಾಡಬೇಕಾಗಿದ್ದು ಶೀಘ್ರವಾಗಿ ಸರ್ಕಾರಿ ಶಿಕ್ಷಕರನ್ನು ನೇಮಿಸುವಂತೆ ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕುಚ್ಚೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಹೇಶ ಶೆಟ್ಟಿ ಮನವಿ ಮಾಡಿದ್ದಾರೆ.
ಕುಚ್ಚೂರು – 1 ಶಾಲೆಯಲ್ಲಿ ೨೫ ವಿದ್ಯಾರ್ಥಿಗಳಿದ್ದು ಮಕ್ಕಳ ವಿದ್ಯಾರ್ಜನೆಗೆ ತೊಂದರೆ ಯಾಗುತ್ತದೆ. ಕೂಡಲೇ ಶಿಕ್ಷಕರನ್ನು ನೇಮಿಸಬೇಕಿದೆ. ತಪ್ಪಿದ್ದಲ್ಲಿ ಶಾಲೆಯು ಮುಚ್ಚುವ ಅಪಾಯವೂ ಇದೆ, ಕೇವಲ ಶಾಲೆಯ ಲೆಕ್ಕಚಾರ ನೋಡಲು ಮಾತ್ರ ಸರ್ಕಾರಿ ಶಿಕ್ಷಕರ ನಿಯೋಜನೆ ಮಾಡುವುದು ಸರಿಯಲ್ಲ, ಶಾಲೆಯು ಉಳಿದು ಮುನ್ನಡೆಯಬೇಕಾದರೆ ಸರ್ಕಾರಿ ಶಿಕ್ಷಕರನ್ನೇ ನಿಯೋಜಿಸಬೇಕು ಎಂದು ಮಹೇಶ ಶೆಟ್ಟಿ ಕುಚ್ಚೂರು ಕಾನ್ಬೆಟ್ಟು ಒತ್ತಾಯಿಸಿದ್ದಾರೆ. ಶನಿವಾರ ಕುಚ್ಚೂರು – 1 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೇ ವಿದ್ಯಾರ್ಥಿಗಳು, ಪೋಷಕರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ವಿದ್ಯಾಭಿಮಾನಿಗಳು ಸೇರಿ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಜ್ಯೋತಿ ಮಾತನಾಡಿ ಅತೀ ಶೀಘ್ರವಾಗಿ ಸರ್ಕಾರಿ ಶಿಕ್ಷಕರನ್ನು ನಮ್ಮ ಶಾಲೆಗೆ ಕಳುಹಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಶನಿವಾರ ಕುಚ್ಚೂರು – 1 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಪೋಷಕರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಹಳೇ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು ಸೇರಿ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದರು.


