ಮುನಿಯಾಲು : ಮುನಿಯಾಲು ಮಾತಿಬೆಟ್ಟು ವಾಸುಕೀ ನಗರದ ಶ್ರೀ ವಾಸುಕೀ ಸುಬ್ರಹ್ಮಣ್ಯ ಸನ್ನಿಧಿಯಲ್ಲಿ ಶ್ರೀ ಪಲಿಮಾರು ಹಿರಿಯ ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ನೂತನ ದೇವವಲ್ಲೀ ಅತಿಥಿಗೃಹ ವನ್ನು ಶುಕ್ರವಾರ ಉದ್ಘಾಟಿಸಿದರು.
ವಿಪ್ರರು ತಮ್ಮ ತಮ್ಮ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಲಭಿಸಿದ ಸಂಪನ್ಮೂಲದಲ್ಲಿ ಒಂದಿಷ್ಟು ಭಾಗವನ್ನು ಸಮಾಜಕ್ಕೆ ಬೇಕಾದ ಶಾಶ್ವತ ಕೊಡುಗೆಯನ್ನು ನೀಡಬೇಕು. ಈ ನೆಲೆಯಲ್ಲಿ ಜ್ಯೋತಿಷ ವಿದ್ವಾನ್ ರಾಘವೇಂದ್ರ ಮುಟ್ಲುಪಾಡಿ ಅವರು ನಿರಂತರ ದೇವತಾ ಆರಾಧನೆ ಜೊತೆಗೆ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಿ ಈ ಕ್ಷೇತ್ರವನ್ನು ಬೆಳೆಸಿದ್ದಾರೆ ಎಂದು ಶ್ರೀ ಗಳು ಅನುಗ್ರಹ ಮಂತ್ರಾಕ್ಷತೆ ನೀಡಿ ಹರಸಿದರು.
ಶ್ರೀ ವಾಸುಕೀ ಸುಬ್ರಹ್ಮಣ್ಯ ಸನ್ನಿಧಿಯಲ್ಲಿ ಸುದರ್ಶನ ಹೋಮ ಹಾಗೂ ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರಿಂದ ಶ್ರೀ ರಾಮ ದೇವರ ಸಂಸ್ಥಾನ ಪೂಜೆ, ಫಲ ಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆಯಿತು.
ವೇದಮೂರ್ತಿ ರಾಜಗೋಪಾಲ ಭಟ್, ವರಲಕ್ಷ್ಮೀ ರಾಘವೇಂದ್ರ ಭಟ್, ಕುಟುಂಬದವರು ಉಪಸ್ಥಿತರಿದ್ದರು.



